ತುಮಕೂರು : ಚುನಾವಣೆಗೆ ಸ್ಪರ್ಧೆ ಮಾಡಿ ಠೇವಣಿ ಕಳೆದುಕೊಳ್ಳುವ ಬದಲು ನಿಮ್ಮ ಅಭ್ಯರ್ಥಿಯನ್ನ ವಾಪಸ್ ತೆಗೆದುಕೊಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಕುಟುಕಿದರು.
ತುಮಕೂರಿನಲ್ಲಿ ವಿ. ಸೋಮಣ್ಣ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ರೋಡ್ ಶೋನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಾನು ಇಂತಹ ಹತ್ತಾರು ಸಭೆಗಳಲ್ಲಿ ಭಾಗವಹಿಸಿದ್ದೇನೆ. ಆದರೆ, ಇವತ್ತಿನ ಕಾರ್ಯಕ್ರಮ ನೋಡಿದ್ರೆ ಆಶ್ಚರ್ಯವಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ನೀವೆಲ್ಲರೂ ಸೇರಿದ್ದೀರಿ. ಈ ಜನಸ್ತೋಮವನ್ನು ನೋಡಿದ್ರೆ ಕಾಂಗ್ರೆಸ್ ನವರು ತಮ್ಮ ಅಭ್ಯರ್ಥಿಯನ್ನ ವಾಪಸ್ ತೆಗೆದುಕೊಳ್ಳಬೇಕು ಅನ್ನಿಸುತ್ತೆ. ನಿಮ್ಮ ಅಭ್ಯರ್ಥಿ ಠೇವಣಿ ಕಳೆದುಕೊಳ್ಳೋ ಬದಲು ಅವರನ್ನ ವಾಪಸ್ ತೆಗೆದುಕೊಳ್ಳಬೇಕು ಎಂದು ಜಾಡಿಸಿದರು.
ಭಾಗ್ಯಲಕ್ಷ್ಮಿ ಯೋಜನೆ ಯಾಕೆ ನಿಲ್ಲಿಸಿದ್ರಿ?
ಸಹಸ್ರ ಸಂಖ್ಯೆಯಲ್ಲಿ ನೀವೆಲ್ಲಾ ಬಂದಿದ್ದೀರಿ. ನಾನು ಕಾಂಗ್ರೆಸ್ ಸರ್ಕಾರಕ್ಕೆ ಕೇಳೋಕೆ ಬಯಸುತ್ತೀನಿ. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ 6 ಸಾವಿರ ಕೊಟ್ರೆ, ನಾನು 4 ಸಾವಿರ ರೂಪಾಯಿ ಕೊಡುತ್ತಿದ್ದೆ. ಅದನ್ನ ನೀವ್ಯಾಕೆ ನಿಲ್ಲಿಸಿದ್ರಿ.. ಉತ್ತರ ಕೊಡ್ತೀರಾ?. ಭಾಗ್ಯಲಕ್ಷ್ಮಿ ಯೋಜನೆಯನ್ನು ಯಾಕೆ ನಿಲ್ಲಿಸಿದ್ರಿ.. ಉತ್ತರ ಕೊಡ್ತೀರಾ? ಎಂದು ಪ್ರಶ್ನೆ ಮಾಡಿದರು.
ಈ ಸರ್ಕಾರ ಪಾಪರ್ ಆಗಿರೋದು ಗೊತ್ತಾಗ್ತಿದೆ
ಜನಪರ ಯೋಜನೆಗಳನ್ನ ನಿಲ್ಲಿಸಿರೋದನ್ನ ನೋಡಿದ್ರೆ ಸರ್ಕಾರ ಪಾಪರ್ ಆಗಿರೋದು ಗೊತ್ತಾಗ್ತಿದೆ. ಈ ಸರ್ಕಾರಕ್ಕೆ ಆಡಳಿತ ನಡೆಸುವ ನೈತಿಕತೆ ಇಲ್ಲ. ವಿ. ಸೋಮಣ್ಣ ಅವರನ್ನು 2 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಿ. ಜೆಡಿಎಸ್ ಹಾಗೂ ಬಿಜೆಪಿ ಪರವಾಗಿ ನಿಮಗೆ ಅಭಿನಂದನೆ ಸಲ್ಲಿಸ್ತೀನಿ ಎಂದು ಯಡಿಯೂರಪ್ಪ ಮನವಿ ಮಾಡಿದರು.