ಮೈಸೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 200 ಸೀಟು ಮೇಲೆ ಗೆಲ್ಲುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭವಿಷ್ಯ ನುಡಿದರು.
ಮಂಡ್ಯದಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಉಪಕಾರ ಸ್ಮರಣೆ ಮಾಡುತ್ತಾರೆ. ರಾಜ್ಯದಲ್ಲಿ ಗ್ಯಾರಂಟಿ ಅಲೆ ಇದೆ. ಇನ್ನು 10 ವರ್ಷ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರದಲ್ಲಿ ಇರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ಅಭ್ಯರ್ಥಿ ಬಗ್ಗೆ ನಾವು ಮಾತನಾಡಲ್ಲ. ಪ್ರಧಾನಿ ಮೋದಿ ಹೆಸರಲ್ಲಿ ವೋಟು ಕೇಳುತ್ತಿದ್ದಾರೆ. ಮೋದಿ ಅಲೆ ಎಲ್ಲಿದೆ..? ನೀವು ಎಲ್ಲಿ ಕಂಡಿದ್ದೀರಿ..? ಅಮಿತ್ ಶಾ ನಿನ್ನೆ ಚನ್ನಪಟ್ಟಣಕ್ಕೆ ಬಂದಿದ್ದರು. ಪ್ರಧಾನಿ ಮೋದಿ ಹಳ್ಳಿ ಹಳ್ಳಿ ಸುತ್ತಾಡಿದರೂ ಯಾಕೆ ನಮಗೆ 136 ಸೀಟು ಬಂತು..? ವೋಟು ಕೇಳುವ ಹಕ್ಕು ಬಿಜೆಪಿಯವರಿಗೆ ಇಲ್ಲ ಎಂದು ಕುಟುಕಿದರು.
ಸಿದ್ದ’ರಾಮ’ನಿಗೆ ನಮ್ಮ ಅಭ್ಯರ್ಥಿ ‘ಲಕ್ಷ್ಮಣ್’
ನಾನು ಜಾತಿ ಮೇಲೆ ಮತ ಕೇಳಲ್ಲ, ನೀತಿ ಮೇಲೆ ಕೇಳುತ್ತೇನೆ. ಇಂದು ನಮ್ಮ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ನಾಮಪತ್ರ ಸಲ್ಲಿಕೆ ಮಾತ್ರ ಮಾಡಿದ್ದಾರೆ. ಏಪ್ರಿಲ್ 13, 14ಕ್ಕೆ ಬೃಹತ್ ಕಾರ್ಯಕ್ರಮ ಮಾಡುತ್ತೇವೆ. ಸಿದ್ದ’ರಾಮ’ನಿಗೆ ನಮ್ಮ ಅಭ್ಯರ್ಥಿ ‘ಲಕ್ಷ್ಮಣ್’. ಸಿದ್ದರಾಮಯ್ಯ ಅವರಿಗೆ ನಮ್ಮ ಲಕ್ಷ್ಮಣಗೌಡ್ರು. ಪಂಚಾಯ್ತಿ, ಪೊಲೀಸ್ ಸ್ಟೇಷನ್ಗೆ 24/7 ಕೆಲಸ ಮಾಡುವ ಅಭ್ಯರ್ಥಿ ಕೊಟ್ಟಿದ್ದೇವೆ. ಸೇವೆ ಮಾಡುವವರನ್ನು ಸಮಾಜ ಗುರುತಿಸುತ್ತದೆ ಎಂದು ಹೇಳಿದರು.
ಪ್ರತಾಪ್ ಸಿಂಹಗೆ ಯಾಕೆ ಟಿಕೆಟ್ ಕೈ ತಪ್ಪಿದೆ?
ಬಿಜೆಪಿ ಸಂಸದರು ಕ್ರಿಯಾಶೀಲವಾಗಿರಲಿಲ್ಲ. ಅವರಿಂದ ಏನೂ ಅಭಿವೃದ್ಧಿಯಾಗಿಲ್ಲ. ಹೀಗಾಗಿ, ಸಂಸದ ಸದಾನಂದಗೌಡ, ಪ್ರತಾಪ್ ಸಿಂಹ ಸೇರಿದಂತೆ ಅನೇಕರಿಗೆ ಟಿಕೆಟ್ ಕೈ ತಪ್ಪಿದೆ ಎಂದು ಬಿಜೆಪಿಗರ ವಿರುದ್ಧ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.