ದೆಹಲಿ : ಗ್ರಾಹಕರ ದಾರಿ ತಪ್ಪಿಸುವ ರೀತಿ ಜಾಹೀರಾತು ಪ್ರಕಟ ಮಾಡಿದ್ದ ಪ್ರಕರಣ ಸಂಬಂಧ, ಯೋಗ ಗುರು ಹಾಗೂ ಪತಂಜಲಿ ಆಯುರ್ವೇದ ಸಂಸ್ಥೆಯ ಸಹ ಸಂಸ್ಥಾಪಕ ಬಾಬಾ ರಾಮದೇವ್ ಅವರಿಗೆ ಸುಪ್ರೀಂ ಕೋರ್ಟ್ ಚಾಟಿ ಬೀಸಿದೆ. ಇದೇ ವೇಳೆ ಪತಂಜಲಿ ಆಯುರ್ವೇದ ಸಂಸ್ಥೆಯ ಕಾರ್ಯ ನಿರ್ವಾಹಕ ನಿರ್ದೇಶಕ ಬಾಲಕೃಷ್ಣ ವಿರುದ್ಧವೂ ಸುಪ್ರೀಂ ಕೋರ್ಟ್ ಹರಿಹಾಯ್ದಿದೆ.
ದಾರಿ ತಪ್ಪಿಸುವ ರೀತಿಯಲ್ಲಿ ನೀವು ಜಾಹೀರಾತು ಪ್ರಕಟ ಮಾಡುವ ಮೂಲಕ ಕಾನೂನಿನ ಬಿಗಿ ಹಿಡಿತಕ್ಕೆ ಸಿಲುಕಿದ್ದೀರಿ, ಹೀಗಾಗಿ ಶಿಕ್ಷೆ ಎದುರಿಸಲು ಸಜ್ಜಾಗಿ ಎಂದು ಬಾಬಾ ರಾಮ್ ದೇವ್ ಅವರಿಗೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಇದನ್ನೂ ಓದಿ: ಅಮಿತ್ ಶಾ ವಿರುದ್ದ ವಾಗ್ದಾಳಿ: ಸಿಎಂ ಪುತ್ರ ಯತೀಂದ್ರಗೆ ಚುನಾವಣಾಧಿಕಾರಿಗಳಿಂದ ನೋಟೀಸ್
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಎಹ್ಸಾನುದ್ದೀನ್ ಅಮಾನುಲ್ಲಾ ಸಾರಥ್ಯದ ಪೀಠವು ಪತಂಜಲಿ ಸಂಸ್ಥೆ ಸಲ್ಲಿಕೆ ಮಾಡಿದ್ದ ಕ್ಷಮಾಪಣಾ ಪತ್ರವನ್ನು ಸ್ವೀಕಾರ ಮಾಡಲು ನಿರಾಕರಿಸಿದೆ. ಕಳೆದ ಬಾರಿ ವಿಚಾರಣೆ ನಡೆದ ವೇಳೆ ಸುಪ್ರೀಂ ಕೋರ್ಟ್ ಪತಂಜಲಿ ಸಂಸ್ಥೆಗೆ ಚಾಟಿ ಬೀಸಿತ್ತು. ಈ ವೇಳೆ ಸಂಸ್ಥೆ ಕ್ಷಮಾಪಣಾ ಪತ್ರ ಸಲ್ಲಿಕೆ ಮಾಡಿತ್ತು. ಆದರೆ, ಈ ಕ್ಷಮಾಪಣಾ ಪತ್ರ ನಮಗೆ ಸಂತಸ ತಂದಿಲ್ಲ ಎಂದು ಜಸ್ಟೀಸ್ ಕೊಹ್ಲಿ ಅವರು ಹೇಳಿದ್ದಾರೆ.