ಬೆಂಗಳೂರು : ಕಾಂಗ್ರೆಸ್ ನಾಯಕರು ಭಯ ಬಿದ್ದೇ ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಮಾತನಾಡುತ್ತಿರೋದು ಎಂದು ಕೈ ನಾಯಕರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟಾಂಗ್ ಕೊಟ್ಟರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಮಲತಾ ಅವರು ಒಂದು ಮಾತು ಹೇಳಿದ್ದಾರೆ. ಆರೋಗ್ಯಕರ ಚರ್ಚೆ ಆಗಿದೆ ಅಂತ ಹೇಳಿದ್ದಾರೆ. ಮಾತುಕತೆ ಫಲಪ್ರದ ಆಗಿದೆಯಾ? ಅಥವಾ ಇಲ್ಲವಾ? ಅಂತ ಅವರ ಅ ಸೂಕ್ಷ್ಮ ಮಾತಿನಿಂದ ಗೊತ್ತಾಗುತ್ತದೆ. ಸುಮಲತಾ ಅವರು ಇಂತಹ ಮಾತು ಆಡಿದ್ದರಿಂದಲೇ ಕಾಂಗ್ರೆಸ್ನವರು ಹೀಗೆ ಮಾತನಾಡ್ತಿರೋದು ಎಂದು ಕುಟುಕಿದರು.
ಪ್ರಧಾನಿ ಮೋದಿ ಹಾಗೂ ಹೆಚ್.ಡಿ. ದೇವೇಗೌಡ ಒಂದೇ ವೇದಿಕೆಯಲ್ಲಿ ಪ್ರಚಾರ ಮಾಡುವ ಬಗ್ಗೆ ಮಾತನಾಡಿದ ಅವರು, ಎಲ್ಲಾ ನಾಯಕರು ಒಟ್ಟಾಗಿ ಪ್ರಚಾರ ಮಾಡುವ ಪ್ಲ್ಯಾನ್ ಸದ್ಯಕ್ಕೆ ಅಗಿಲ್ಲ. ನರೇಂದ್ರ ಮೋದಿ ಅವರಿಗೆ ದೇಶ್ಯಾದ್ಯಂತ ಪ್ರಚಾರ ಮಾಡುವ ಅನಿವಾರ್ಯತೆ ಇದೆ. ಅವರೇ ಎಲ್ಲಾ ಕಡೆ ಓಡಾಡಬೇಕು. ಹೀಗಾಗಿ, ಒಂದೋ, ಎರಡೋ ಕಾರ್ಯಕ್ರಮಗಳಲ್ಲಿ ಕರ್ನಾಟಕಕ್ಕೆ ಬಂದಾಗ ಅನಿವಾರ್ಯ ಇರುವ ಕಡೆ ಒಟ್ಟಾಗಿ ಪ್ರಚಾರ ಮಾಡ್ತೀವಿ. ದೇವೇಗೌಡ-ಮೋದಿ ಸೇರ ಬೇಕು ಅಂತ ಅಪೇಕ್ಷೆ ಇದೆ. ಯಾವುದಾದರೂ ಒಂದು ವೇದಿಕೆಯಲ್ಲಿ ಅವರಿಬ್ಬರು ಜೊತೆಗೂಡಿ ಪ್ರಚಾರ ಮಾಡ್ತಾರೆ ಎಂದು ತಿಳಿಸಿದರು.
ದುಡುಕಿ ನಿರ್ಧಾರ ಮಾಡಬೇಡಿ ಅಂತ ಹೇಳಿದ್ದೇನೆ
ಚಿಕ್ಕಬಳ್ಳಾಪುರ ನಾಯಕ ಸಭೆ ವಿಚಾರವಾಗಿ ಮಾತನಾಡಿ, ಬಚ್ಚೇಗೌಡರು ನಮ್ಮ ಸ್ನೇಹಿತರೇ.. ನಾನು ಅವರನ್ನು ಕರೆಸಿ ಮಾತನಾಡಿದ್ದೇನೆ. ದುಡುಕಿ ನಿರ್ಧಾರ ಮಾಡಬೇಡಿ ಅಂತ ಹೇಳಿದ್ದೇನೆ. 100ಕ್ಕೆ 80 ಭಾಗ ಯಾರು ಪಕ್ಷ ಬಿಟ್ಟು ಹೋಗಿಲ್ಲ. 8 ರಿಂದ 10 ಭಾಗ ಅವರ ಬೆಂಬಲಿಗರು ಪಕ್ಷ ಬಿಟ್ಟು ಹೋಗಿರಬಹುದು. ಅದಕ್ಕೆ ಸರಿಯಾಗಿ ನಾವು ಯಾವ ರೀತಿ ಸಂಘಟನೆ ಮಾಡಬೇಕು ಅಂತ ಚರ್ಚೆ ಮಾಡಿದ್ದೇವೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.