ಮಂಡ್ಯ : ನಾನು ಸಂಸದನಾದರೆ ಮಂಡ್ಯ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.
ಮಂಡ್ಯದಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಸಂಸದನಾದ ಮೇಲೆ ಎಲ್ಲಾ ಸಂಸದರ ವಿಶ್ವಾಸ ಪಡೆದು, ನೀರಾವರಿ ಸಮಸ್ಯೆ ಬಗೆಹರಿಸೋದು ನನ್ನ ಉದ್ದೇಶ ಎಂದರು.
ನಾನು ಈ ಬಾರಿ ಲೋಕಸಭಾ ಚುನಾವಣೆಗೆ ನಿಲ್ಲಬೇಕು ಅಂದುಕೊಂಡವನಲ್ಲ. ಪುಟ್ಟರಾಜು ಅಥವಾ ತಮ್ಮಣ್ಣ ಅವರನ್ನು ನಿಲ್ಲಿಸಬೇಕೆಂದಿದ್ದೆ. ಎಲ್ಲರ ಒತ್ತಡಕ್ಕೆ ಮಣಿದು ನಾನು ಅಭ್ಯರ್ಥಿ ಆದೆ. ನಿಖಿಲ್ ಇಡೀ ರಾಜ್ಯದಲ್ಲಿ ಪ್ರಚಾರ ಮಾಡಲು ಮುಂದಾಗಿದ್ದಾರೆ. ಅವರಿಗೆ ಚುನಾವಣೆಗೆ ನಿಲ್ಲಲು ಮನಸ್ಸಿಲ್ಲ ಎಂದು ಹೇಳಿದರು.
ನನಗೆ ಯಾರೂ ಸರ್ಟಿಫಿಕೇಟ್ ಕೊಡಬೇಕಿಲ್ಲ
ಎಲ್ಲರ ಅಪೇಕ್ಷೆ ಮೇರೆಗೆ ನಾನು ಲೋಕಸಭಾ ಚುನಾವಣೆ ಎದುರಿಸಲು ಬಂದಿದ್ದೇನೆ. ನಾನು ಸಂಸದನಾದರೆ ಈ ಜಿಲ್ಲೆಯ ಅಭಿವೃದ್ಧಿಗೆ ಬದ್ಧನಾಗಿದ್ದೇನೆ. ನನಗೆ ಯಾರೂ ಸರ್ಟಿಫಿಕೇಟ್ ಕೊಡಬೇಕಾಗಿಲ್ಲ. ನನಗೆ ಜನರೇ ಸರ್ಟಿಫಿಕೇಟ್ ಕೊಡ್ತಾರೆ. ಜಿಲ್ಲೆಯ ಜನತೆ ಉತ್ತಮ ಬದುಕು ಕಟ್ಟಿಕೊಳ್ಳುವ ರೀತಿ ಅಭಿವೃದ್ಧಿ ಮಾಡುತ್ತೇನೆ ಎಂದು ತಿಳಿಸಿದರು.
ಅವ್ರು ನಮಗೆ ಯಾವತ್ತೂ ಅನ್ಯಾಯ ಮಾಡಿಲ್ಲ
ನನ್ನ ಮೇಲೆ ಜಿಲ್ಲೆಯ ಜನತೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಆ ವಿಶ್ವಾಸವನ್ನ ನಾನು ಉಳಿಸಿಕೊಳ್ಳುತ್ತೇನೆ. ಮಂಡ್ಯ ಜಿಲ್ಲೆಗೂ ನನಗೂ ಉತ್ತಮ ಸಂಭಂದವಿದೆ.. ನಾನು ಹಲವಾರು ಕಡೆ ಪ್ರಚಾರ ಮಾಡಬೇಕಾದ ಅನಿವಾರ್ಯತೆ ಇದೆ. ನಮ್ಮ ಕಾರ್ಯಕರ್ತರು ನಮಗೆ ಯಾವತ್ತೂ ಅನ್ಯಾಯ ಮಾಡಿಲ್ಲ. ಕಾರ್ಯಕರ್ತರ ಪ್ರೀತಿಯಿಂದಲೇ ಪಕ್ಷ ಉಳಿದುಕೊಂಡಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.