ಕಾರವಾರ : ಜೆಡಿಎಸ್ ಪಕ್ಷಕ್ಕೆ ಸೆಕ್ಯುಲರ್ ಪದ ಇಲ್ಲ. ಅವರ ಕುಟುಂಬದವರನ್ನೇ ಬೇರೆ ಪಕ್ಷದಿಂದ ಚುನಾವಣೆಗೆ ನಿಲ್ಲಿಸುವ ಪರಿಸ್ಥಿತಿ ಇದೆ ಎಂದು ಕುಮಾರಸ್ವಾಮಿ ಹೆಸರೇಳದೆಯೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕುಟುಕಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಈಗ ಇಲ್ಲಿ ಹೋಗಿದೆ? ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಪ್ರಾರಂಭದಲ್ಲೇ ಎಡವಿದೆ ಎಂದು ಜರಿದರು.
ಬಿಜೆಪಿಯಲ್ಲಿ ಪಕ್ಷದ ಅಧ್ಯಕ್ಷರಾದವರಿಗೂ, ಮಾಜಿ ಸಿಎಂಗೆ ಟಿಕೆಟ್ ಇಲ್ಲ. ಯಾರು ಮನೆ ಕಟ್ಟಿದ್ದಾರೆ? ಯಾರು ಪಕ್ಷಕ್ಕೆ ಫೌಂಡೇಷನ್ ಹಾಕಿದ್ದಾರೆ? ಯಾರು ಹೋರಾಟ ಮಾಡಿದ್ದಾರೆ? ಅವರಿಗೇ ಬಿಜೆಪಿ ಟಿಕೆಟ್ ನೀಡಿಲ್ಲ. ಪಕ್ಷ ಕಟ್ಟಿದವರು ಮನೆಯಲ್ಲಿ ಕುಳಿತಿದ್ದಾರೆ. ಹೊಸಬರಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಬಿಜೆಪಿಗರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಸಮಯವೇ ಅವರಿಗೆ ಉತ್ತರ ಕೊಡಲಿದೆ
ಕೇಂದ್ರ ಬಿಜೆಪಿ ಸರ್ಕಾರದಿಂದ ಇಡಿ ದಾಳಿ ಮಾಡಲಾಗುತ್ತಿದೆ. ಪ್ರಕೃತಿ ನಿಯಮ ಅನ್ನುವುದು ಒಂದು ಇರುತ್ತದೆ. ಸಮಯವೇ ಅವರಿಗೆ ಉತ್ತರ ಕೊಡಲಿದೆ ಎಂದು ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದರು.