ಬೆಂಗಳೂರು : ಮಾಜಿ ಸಚಿವ, ಕೆಆರ್ಪಿಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಅವರು ಇಂದು ಅಧಿಕೃತವಾಗಿ ಬಿಜೆಪಿ ಪಕ್ಷ ಸೇರ್ಪಡೆಯಾದರು.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಜನಾರ್ದನ ರೆಡ್ಡಿ ಮತ್ತೆ ಕಮಲ ಬಾವುಟವನ್ನು ಹಿಡಿದಿದ್ದಾರೆ. ಇದೇ ವೇಳೆ ತಮ್ಮ ಕೆಆರ್ಪಿಪಿ ಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಜನಾರ್ಧನ ರೆಡ್ಡಿಗೆ ಬಿಜೆಪಿ ಪಕ್ಷದ ಶಾಲು ಹಾಕಿ, ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಪತ್ನಿ ಅರುಣಾ ಹಾಗೂ ಟಿ. ಜಾನ್ ಪುತ್ರ ಥಾಮಸ್ ಕೂಡ ಬಿಜೆಪಿ ಪಕ್ಷ ಸೇರಿದರು.
ಯಾವುದೇ ಕಂಡೀಷನ್ ಹಾಕಿಲ್ಲ
ಬಿಜೆಪಿಗೆ ಮತ್ತೆ ಖುಷಿಯಾಗಿ ಸೇರ್ಪಡೆಯಾಗಿದ್ದೇನೆ. ಯಾವುದೇ ಕಂಡೀಷನ್ ಹಾಕಿಲ್ಲ. ಶ್ರೀರಾಮುಲು ಗೆಲುವು ನಿಶ್ಚಿತ ಎಂದು ಜನಾರ್ಧನ ರೆಡ್ಡಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಳ್ಳಾರಿ ಬಿಜೆಪಿ ಅಭ್ಯರ್ಥಿ ಬಿ. ಶ್ರೀರಾಮುಲು, ಮಾಜಿ ಸಚಿವರಾದ ಸಿ.ಟಿ ರವಿ, ಆನಂದ್ ಸಿಂಗ್, ಡಾ.ಸಿ.ಎನ್. ಅಶ್ವತ್ಥ ನಾರಾಯಣ್, ಸಂಸದ ಪಿ.ಸಿ. ಮೋಹನ್ ಉಪಸ್ಥಿತರಿದ್ದರು.