ಬೆಂಗಳೂರು : ಶ್ರೀರಾಮುಲು ಅವರನ್ನು ಮಗು ರೀತಿ ಬೆಳೆಸಿದ್ದೀವಿ. ಬಿಜೆಪಿಗೆ ಮರಳಲು ಎಲ್ಲರೂ ಒಪ್ಪಿಗೆ ನೀಡಿದ್ದಾರೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಧಾ ಮೋಹನ್ ದಾಸ್ ಅಗರ್ವಾಲ್ ಹಾಗೂ ಬಿಜೆಪಿಯ ಎಲ್ಲಾ ನಾಯಕರ ಆಹ್ವಾನದ ಮೇರೆಗೆ ನಾಳೆ ಬೆಳಗ್ಗೆ 10 ಗಂಟೆಗೆ ಬಿಜೆಪಿ ಸೇರುತ್ತಿದ್ದೇನೆ ಎಂದರು.
ಚಿಕ್ಕ ವಯಸ್ಸಿನಲ್ಲೇ ಬಿಜೆಪಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಆದೆ. ಅಡ್ವಾಣಿ ಅವರ ಜೊತೆಯೇ ರಥಯಾತ್ರೆ ಎಳೆದಿದ್ವಿ. ತಾಯಿ ಸಮಾನವಾದ ಬಿಜೆಪಿಗೆ ಮರಳುವ ಮುನ್ನ, ನನ್ನ ಕಷ್ಟದಲ್ಲಿ ಜೊತೆಯಿದ್ದ ಚಿತ್ರದುರ್ಗ, ಬಾಗಲಕೋಟೆ, ಬಳ್ಳಾರಿಯ ಎಲ್ಲಾ ಕೆಆರ್ಪಿಪಿ ಮುಖಂಡರ ಅಭಿಪ್ರಾಯ ಪಡೆದಿದ್ದೇನೆ ಎಂದು ತಿಳಿಸಿದರು.
ಮತ್ತೆ ಮೋದಿ ಪ್ರಧಾನಿ ಆಗಬೇಕು
ಮತ ಯಾರಿಗೆ ಚಲಾಯಿಸಿದೆ ಅಂತ ಕೇಳಿದ್ದಿರಿ. ರಾಜ್ಯಸಭಾ ಚುನಾವಣೆಯಲ್ಲಿ ಆತ್ಮಸಾಕ್ಷಿಯ ಮತ ಚಲಾಯಿಸಿದ್ದೇನೆ. ಪುಟಿನ್ ಕೂಡಾ ಮತ್ತೆ ನರೇಂದ್ರ ಮೋದಿ ಅವರನ್ನ ಪ್ರಧಾನಿಯಾಗ್ತೀರಿ ಅಂತ ಹೇಳಿದ್ದಾರೆ. ಇಡೀ ವಿಶ್ವದಲ್ಲೇ ಭಾರತಕ್ಕೆ ಒಳ್ಳೆಯ ಹೆಸರು ತಂದ ಕೀರ್ತಿ ಪ್ರಧಾನಿ ಮೋದಿ ಅವರದ್ದು. ಅವರನ್ನ ಮತ್ತೆ ಪ್ರಧಾನಿಯನ್ನಾಗಿ ಮಾಡಬೇಕು ಎಂದು ಹೇಳಿದರು.
ವಿಡಿಯೋ ಕ್ಲಿಪಿಂಗ್ ಇದ್ರೆ ತೋರಿಸಿ
ಈ ಹಿಂದೆ ಬಿಜೆಪಿ ಜೊತೆ ಕೆಆರ್ಪಿಪಿ ಪಕ್ಷವನ್ನು ಮರ್ಜ್ ಮಾಡೋದಾಗಿ ನಾನು ಹೇಳಿಯೇ ಇಲ್ಲ. ನಾನು ಹಾಗೆ ಹೇಳಿದ ವಿಡಿಯೋ ಕ್ಲಿಪಿಂಗ್ ಇದ್ರೆ ತೋರಿಸಿ. ಕೇಂದ್ರ ನಾಯಕರಿಗೆ ನಿಮ್ಮನ್ನು ಮರಳಿ ಬಿಜೆಪಿಗೆ ತರಲು ಇಷ್ಟ ಇರಲಿಲ್ಲ ಅಲ್ಲವೇ ಎಂದು ಕೇಳಿದ್ದಕ್ಕೆ, ಅದು ನಿಮ್ಮ ಊಹೆ ಎಂದು ಜನಾರ್ದನ ರೆಡ್ಡಿ ಸ್ಪಷ್ಟನೆ ನೀಡಿದರು.