ಹಾಸನ : ರಾಜ್ಯ ಬಿಜೆಪಿ ಸಂಸದರನ್ನು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ‘ನಪುಂಸಕರು’ ಎಂದು ಜರಿದು ಮತ್ತೆ ವಿವಾದ ಮೈ ಮೇಲೆ ಎಳೆದುಕೊಂಡಿದ್ದಾರೆ.
ಹಾಸನದಲ್ಲಿ ನಡೆದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ಸಂಸದರು ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಮ್ಮ ರಾಜ್ಯದಿಂದ ಹೋಗಿರುವ ಸಂಸದರು ಒಬ್ಬರಾದರೂ ಪಾರ್ಲಿಮೆಂಟ್ ಒಳಗೆ ಆಗಲಿ ಹಾಗೂ ಹೊರಗಡೆ ಆಗಲಿ ನಮ್ಮ ರಾಜ್ಯಕ್ಕೆ ನಿಯಮಾನುಸಾರ ಏನೆಲ್ಲಾ ಅನುಕೂಲ ನೀಡಬೇಕು ಅದನ್ನು ಕೊಡಿ ಎಂದು ಕೇಳಿಲ್ಲ. ಅಂತಹ ‘ನಪುಂಸಕ’ ಲೋಕಸಭಾ ಸದಸ್ಯರನ್ನು ನಮ್ಮ ರಾಜ್ಯದಿಂದ ಕಳಿಸಿದ್ದೇವೆ. ಇದು ನಮಗೆಲ್ಲಾ ಅವಮಾನ ಆಗುತ್ತೆ ಎಂದು ಕಿಡಿಕಾರಿದ್ದಾರೆ.
ಪ್ರಧಾನಿ ಮೋದಿ ಬರೀ ಸುಳ್ಳು ಹೇಳಿದ್ದಾರೆ
10 ವರ್ಷಗಳು ನರೇಂದ್ರ ಮೋದಿಯವರು ಬರೀ ಸುಳ್ಳು ಹೇಳಿದರೆ, ಹೊರತು ಬೇರೆ ಏನು ಮಾಡಲಿಲ್ಲ. ಎರಡು ಕೋಟಿ ಉದ್ಯೋಗ ನೀಡಲಿಲ್ಲ, ಹದಿನೈದು ಲಕ್ಷ ಹಣ ಕೊಡಲಿಲ್ಲ. ನಾವೆಲ್ಲ ಸಚಿವರು ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ವಿ. 4 ಲಕ್ಷ ಕೋಟಿ ಹೆಚ್ಚು ಹಣ ಕೇಂದ್ರಕ್ಕೆ ತೆರಿಗೆ ನೀಡುತ್ತೇವೆ. ನಮ್ಮ ರಾಜ್ಯದಿಂದ 100 ರೂಪಾಯಿ ಹೋದರೆ ನಮಗೆ ಬರುವುದು 13 ಪೈಸೆ ಮಾತ್ರಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ
ನಮ್ಮ ತೆರಿಗೆ ನಮ್ಮ ಹಕ್ಕು ಅಭಿಯಾನವನ್ನು ದೆಹಲಿಯಲ್ಲಿ ಮಾಡಿದೆವು. ಬರಗಾಲವಿದೆ, ಕುಡಿಯುವ ನೀರಿಗೆ ಹಾಹಾಕಾರವಿದೆ, ಜಾನುವಾರುಗಳಿಗೆ ಮೇವು ಇಲ್ಲ. ಆದರೂ, ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿ ಹಣ ಬಿಡುಗಡೆ ಮಾಡಿಲ್ಲ. ನಮ್ಮ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ. ನಮ್ಮ ರಾಜ್ಯದ ಯಾವುದೇ ಸಮಸ್ಯೆ ಲೋಕಸಭೆಯಲ್ಲಿ ಚರ್ಚೆ ಆಗಲ್ಲ ಎಂದು ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.