ಉಡುಪಿ : ಶಿವಮೊಗ್ಗ ಲೋಕಸಭಾ ಚುನಾವಣಾ ಕಣದಲ್ಲಿ ಮಾತಿನ ಸಮರ ತಾರಕಕ್ಕೇರಿದೆ. ಬಿಜೆಪಿಯದ್ದು ಹಡಬಿ ದುಡ್ಡು ಪಾಲಿಟಿಕ್ಸ್ ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯ ಬೈಂದೂರಲ್ಲಿ ಮಾತನಾಡಿರುವ ಅವರು, ಸಂಸದ ಬಿ.ವೈ. ರಾಘವೇಂದ್ರ ದುಡ್ಡು, ರೆಸಾರ್ಟ್ ಜಮೀನು ಮಾಡ್ತಾರೆ. ಹಡಬಿ ದುಡ್ಡು ಹಿಡ್ಕೊಂಡು ಚುನಾವಣೆಗೆ ಬರ್ತಾರೆ ಎಂದು ಕುಟುಕಿದ್ದಾರೆ.
ರಾಘವೇಂದ್ರಂದು ಶಿವಮೊಗ್ಗದಲ್ಲಿ ಬಸ್ ಸ್ಟ್ಯಾಂಡ್ ಮಾತ್ರ ಸಾಧನೆ. ಎಲ್ಲೆಲ್ಲಿ ಖರೀದಿ ಮಾಡಿದ್ದಾರೆ? ಹಣದ ರಾಶಿ ಹಾಕಿದ್ದಾರೆ? ಅದನ್ನು ಚೆಲ್ಲಲು ಬರ್ತಾರೆ. ಮೂರು ಸಲ ರಾಘವೇಂದ್ರ ಹಡಬಿ ದುಡ್ಡಿನ ರಾಜಕೀಯ ಮಾಡಿ ಗೆದ್ದಿದ್ದಾರೆ. ನಾವೂ ಹಿಂದುತ್ವವೇ, ಈಶ್ವರಪ್ಪನ ಹಿಂದುತ್ವವನ್ನು ಒದ್ದು ಹೊರಗೆ ಹಾಕಿದ್ದಾರೆ. ಈಶ್ವರಪ್ಪನ ಎದೆ ಬಗೆದರೆ ಯಡಿಯೂರಪ್ಪ ಕಾಡ್ತಾರಂತೆ ಎಂದು ಚಾಟಿ ಬೀಸಿದ್ದಾರೆ.
ಬಿ.ಬೈ ರಾಘವೇಂದ್ರ ತಿರುಗೇಟು
ಬೇಳೂರು ಗೋಪಾಲಕೃಷ್ಣಗೆ ಬಿ.ಬೈ. ರಾಘವೇಂದ್ರ ತಿರುಗೇಟು ನೀಡಿದ್ದಾರೆ. ಹಡಬಿ ದುಡ್ಡಿನ ಅರ್ಥ ನನಗೆ ಗೊತ್ತಿಲ್ಲ. ಹಡಬಿ ದುಡ್ಡು ಮಾಡಿದವರಿಗೆ ಅಂತ ಪದ ಬರುತ್ತೆ. ಕಾಂಗ್ರೆಸ್ನವರು ಅಡಿಕೆ ಮಾರಿದ ದುಡ್ಡಿನಲ್ಲಿ ಚುನಾವಣೆ ಮಾಡುತ್ತಾರಾ? ನೀವು ಯಾವ ದುಡ್ಡಿನಲ್ಲಿ ಚುನಾವಣೆ ಮಾಡುತ್ತೀರಿ. ಅಡಿಕೆ ಕೊಯ್ದು, ಭತ್ತ ಮಾರಿದ ಹಣದಲ್ಲಿ ಚುನಾವಣೆ ಮಾಡ್ತಾರಾ ನೋಡೋಣ ಎಂದು ರಾಘವೇಂದ್ರ ಸವಾಲ್ ಹಾಕಿದ್ದಾರೆ.