ಶಿವಮೊಗ್ಗ : ಕಾಂಗ್ರೆಸ್ ಸುಳ್ಳು ಹೇಳಿ ಜನರ ಜೇಬು ಲೂಟಿ ಹೊಡೆಯುತ್ತದೆ. ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು.
ಶಿವಮೊಗ್ಗದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಹಲವಾರು ಸುಳ್ಳುಗಳನ್ನು ಸತ್ಯವಾಗಿಸಲು ಹೊರಟಿದೆ. ಸುಳ್ಳನ್ನು ಸತ್ಯ ಎಂದು ಸಾಬೀತು ಮಾಡಲು ಮತ್ತೆ ಸುಳ್ಳು ಹೇಳುತ್ತೆ. ಸಿಕ್ಕಿ ಹಾಕಿಕೊಂಡಾಗ ಸುಳ್ಳು ಹೇಳಿ ಬಚಾವ್ ಆಗಲು ಮತ್ತೆ ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ಕುಟುಕಿದರು.
ರಾಜ್ಯದಲ್ಲಿ ಸರ್ಕಾರ ನಡೆಸಲು ಹಣವೇ ಇಲ್ಲವಾಗಿದೆ. ಸಿಎಂ ಪೇಟಿಎಂ ಆಗಿದ್ದಾರೆ. ಕೆಲವರು ಆರೋಪಿ ಸಿಎಂ ಇದ್ದಾರೆ. ಸುಳ್ಳು ಹೇಳುವ ಸಿಎಂ ಇದ್ದಾರೆ. ಶ್ಯಾಡೋ ಸಿಎಂ ಇದ್ದಾರೆ. ಇವರೆಲ್ಲರೂ ಸೇರಿ ಕರ್ನಾಟಕ ಲೂಟಿ ಮಾಡುತ್ತಿದ್ದಾರೆ. ಹೀಗಾಗಿ, ಕರ್ನಾಟಕದ ಎಲ್ಲಾ ಲೋಕಸಭೆ ಸೀಟುಗಳು ಬಿಜೆಪಿಯದ್ದಾಗಬೇಕು ಎಂದು ಕರೆ ನೀಡಿದರು.
ದೇಶವನ್ನೇ ಕಾಂಗ್ರೆಸ್ ಇಬ್ಭಾಗವನ್ನಾಗಿಸಿತ್ತು
ಇಂಡಿಯಾದ ಪರವಾಗಿ ಭಾರತದ ಹಿಂದೂ ಶಕ್ತಿ ಸಮಾಪ್ತಿ ಮಾಡಲು ಹೊರಟಿದೆ. ಇಂಡಿಯಾದ ಶಕ್ತಿ ವಿನಾಶಕ್ಕೆ ಘೋಷಣೆ ಮಾಡಿದ್ದಾರೆ. ಇದಕ್ಕೆ ಭಾರತದವರಾದ ನಾವು ಕಡಿವಾಣ ಹಾಕಬೇಕಿದೆ. ದೇಶದ ಕೋಟಿ, ಕೋಟಿ ಜನರು ನಮ್ಮ ಶಕ್ತಿಯಾಗಿದ್ದಾರೆ. ದೇಶದಲ್ಲಿ ಜಾತಿ, ಧರ್ಮ, ಸಮುದಾಯಗಳನ್ನು ಬೇರ್ಪಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ದೇಶವನ್ನೇ ಇಬ್ಭಾಗವನ್ನಾಗಿಸಿದ್ದ ಕಾಂಗ್ರೆಸ್ ಈ ಕೆಲಸ ಕೂಡ ಮಾಡುತ್ತೆ. ದೇಶದ ಜನರು ಇದರಿಂದ ಬಹಳ ಎಚ್ಚರಿಕೆಯಿಂದ ಇರಿ ಎಂದು ಕಿಡಿಕಾರಿದರು.