ನವದೆಹಲಿ : ಮೈತ್ರಿ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ. ಅಂತಿಮ ಸಭೆ ಆದ ಬಳಿಕ ತಿಳಿಸ್ತೇನೆ ಅಂತ ಅವರು ತಿಳಿಸಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಶ್ ಸ್ಫೋಟಕ ಹೇಳಿಕೆ ನೀಡಿದರು.
ನವದೆಹಲಿಯಲ್ಲಿ ಜೆ.ಪಿ. ನಡ್ಡಾ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುದೀರ್ಘವಾದ ಚರ್ಚೆಯಲ್ಲಿ ನನ್ನ ಸಲಹೆಗಳನ್ನು ನಾನು ಕೊಟ್ಟಿದ್ದೇನೆ. ಅವರು ಕೂಡ ಸಲಹೆ ನೀಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಹೈಕಮಾಂಡ್ ಕರೆ ಹಿನ್ನೆಲೆ ದೆಹಲಿಗೆ ಬಂದಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷ ಹೇಗೆ ನಡೆಸಿಕೊಳ್ಳುತ್ತೆ ಅನ್ನೊದು ಮುಖ್ಯ. ನಂತರ ಬೆಂಬಲಿಗರ ಸಭೆ ಮಾಡಿ ನಿರ್ಧಾರ ಮಾಡ್ತೇನೆ. ಯಾವುದೇ ಕಾರಣಕ್ಕೂ ಕಾರ್ಯಕರ್ತರನ್ನು ಬಿಟ್ಟು ಕೊಡುವುದಿಲ್ಲ. ಈ ಮಾತನ್ನು ಸ್ವತಃ ಪ್ರಧಾನಿಯವರೇ ಹೇಳಿದ್ದಾರೆ ಅಂತ ನಡ್ಡಾ ಹೇಳಿದ್ದಾರೆ ಎಂದು ಹೇಳಿದರು.
ಅಮಿತ್ ಶಾ ಸಮಯ ಕೇಳಿದ್ದೇನೆ
ನಿಮ್ಮ ಬಗ್ಗೆ ಪಕ್ಷದ ಹೈಕಮಾಂಡ್ಗೆ ಗೌರವ ಇದೆ ಅಂತನೂ ಹೇಳಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೂ ಕೂಡ ಪ್ರಧಾನಿ ಕಚೇರಿಯಿಂದ ಸೂಚಿಸಿದ್ದಾರೆ. ಅಮಿತ್ ಶಾ ಸಮಯ ಕೇಳಿದ್ದೇನೆ, ನಾಳೆಯೊಳಗೆ ಭೇಟಿಯಾಗಬಹುದು ಎಂದು ಸಂಸದೆ ಸುಮಲತಾ ತಿಳಿಸಿದರು.