ಬೆಂಗಳೂರು : ಗುಬ್ಬಿ ಕಾಂಗ್ರೆಸ್ ಶಾಸಕ ಹಾಗೂ ಕೆಎಸ್ಸಾರ್ಟಿಸಿ ಅಧ್ಯಕ್ಷರೂ ಆದ ಎಸ್.ಆರ್. ಶ್ರೀನಿವಾಸ್ ವಿರುದ್ಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪ್ರತಿಭಟನಾ ನಿರತ ತಮ್ಮದೇ ಕಾಂಗ್ರೆಸ್ ಪಕ್ಷದ ನಾಯಕನ ಮೇಳೆ ಹಲ್ಲೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ದೂರು ದಾಖಲಾಗಿದೆ. ಚುನಾವಣೆ ಹೊಸ್ತಿಲಲ್ಲೇ ಶ್ರೀನಿವಾಸ್ ಅವರಿಗೆ ಬಿಗ್ ಶಾಕ್ ಎದುರಾಗಿದೆ.
ಈ ಬಗ್ಗೆ ಸ್ವತಃ ಹಲ್ಲೆಗೊಳಗಾದ ತುಮಕೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ನೀಡಿರುವ ದೂರಿನ ಮೇರೆಗೆ ಪೊಲೀಸರು ಶಾಸಕ ಶ್ರೀನಿವಾಸ್ ಮೇಲೆ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕಳೆದ ಗುರುವಾರ ಟೆಂಡರ್ ಕಾಮಗಾರಿಯಲ್ಲಿ ಆಗಿರುವ ಅನ್ಯಾಯ ಖಂಡಿಸಿ ರಾಯಸಂದ್ರ ರವಿಕುಮಾರ್ ಪ್ರತಿಭಟನೆ ನಡೆಸಿದ್ದರು. ತುಮಕೂರಿನ ಲೋಕೋಪಯೋಗಿ ಇಲಾಖೆಯ ಆವರಣದಲ್ಲಿ ಶಾಸಕರು ಅತ್ಯಂತ ಕೆಟ್ಟ ಮಾತುಗಳಿಂದ ನಿಂದಿಸಿ, ಗೂಂಡಾಗಳಂತೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ.
ಶಾಸಕರ ಬೆಂಬಲಿಗರಿಂದಲೂ ಹಲ್ಲೆ
ಶಾಸಕರ ಜೊತೆ ಬಂದಿದ್ದ ಕೆಲವರು ರವಿಕುಮಾರ್ ಮೇಲೆ ಕೈ ಮಾಡಿದ್ದರು. ಹಲ್ಲೆಯ ವಿಡಿಯೋ ಸೆರೆ ಹಿಡಿಯಲು ಮುಂದಾದ ಇಬ್ಬರ ಮೊಬೈಲ್ಗಳನ್ನು ಶಾಸಕರ ಜೊತೆ ಬಂದಿದ್ದವರು ಕಿತ್ತುಕೊಂಡಿದ್ದರು. ಹಲ್ಲೆ ನಡೆಯುತ್ತಿರುವುದನ್ನು ಠಾಣೆಗೆ ವರದಿ ಮಾಡಲು ಪ್ರಯತ್ನಿಸಿದ ಪೊಲೀಸ್ ಅಧಿಕಾರಿಯ ಕೈಯನ್ನು ತಿರುಚಿ ಪೋನ್ ಕಿತ್ತುಕೊಂಡಿದ್ದರು.