ಹುಬ್ಬಳ್ಳಿ : ಊಟ ಮಾಡುವಾಗ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹಣಕಾಸಿನ ವಿಚಾರಕ್ಕೆ ಚಾಕುವಿನಿಂದ ಇರಿದು ಯುವಕನನ್ನು ಕೊಲೆ ಮಾಡಲಾಗಿದೆ. ಹುಬ್ಬಳ್ಳಿ ತಾಲೂಕಿನ ವರೂರು ಗ್ರಾಮದ ಜಗದೀಶ ಢಾಬಾದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
ವರೂರು ಗ್ರಾಮದ ಸುಧೀರ್ ಹುಲಗಣ್ಣವರ್ (31) ಕೊಲೆಯಾದ ಯುವಕ. ಅದೇ ಗ್ರಾಮದ ಸಾಗರ ಮಹಾದೇವಪ್ಪ ಗಬ್ಬನ್ನವರ ಕೊಲೆ ಮಾಡಿರುವ ಆರೋಪಿ.
ಸಾಗರ ಮಹಾದೇವಪ್ಪ ಗಬ್ಬನ್ನವರ ಹಾಗೂ ಸುಧೀರ್ ಹುಲಗಣ್ಣವರ್ ಇಬ್ಬರೂ ಜಗದೀಶ ಢಾಬಾದಲ್ಲಿ ಊಟ ಮಾಡುತ್ತಿದ್ದರು. ಈ ವೇಳೆ ಇಬ್ಬರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ಆರಂಭವಾಗಿತ್ತು. ನೋಡು ನೋಡುತ್ತಿದ್ದಂತೆ ಈ ಜಗಳ ವಿಕೋಪಕ್ಕೆ ಹೋಗಿತ್ತು.
ಚಾಕುವಿನಿಂದ ಇರಿದು ಕೊಲೆ
ಏಕಾಏಕಿ ಚಾಕುವಿನಿಂದ ಇರಿದು ಸುಧೀರ್ ನನ್ನು ಕೊಲೆಗೈದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಅಲ್ಲಿದ್ದ ಸ್ಥಳೀಯರು ಆರೋಪಿ ಸಾಗರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.