ಧಾರವಾಡ : ಬೆಳಗಾವಿ ಲೀಸ್ಟ್ನಲ್ಲಿ ಜಗದೀಶ್ ಶೆಟ್ಟರ್ ಅವರ ಹೆಸರಿದೆ. ಬೆಳಗಾವಿ ಅಥವಾ ಎಲ್ಲಿಯೇ ಟಿಕೆಟ್ ಸಿಕ್ಕರೂ ನಾನು ಸಂತೋಷ ಪಡುವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ನರೇಂದ್ರ ಮೋದಿ ನೇತೃತ್ವದಲ್ಲಿ ಯಾರೂ ಬಿಜೆಪಿ ಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರಡಿ ಸಂಗಣ್ಣ ಕಾಂಗ್ರೆಸ್ ಸೇರ್ಪಡೆ ವಿಚಾರ ಕುರಿತು ಮಾತನಾಡಿದ ಅವರು, ಆ ರೀತಿ ಏನೂ ಗಮನಕ್ಕೆ ಬಂದಿಲ್ಲ. ಅವರೊಂದಿಗೆ ನಾನು ಮಾತನಾಡುವೆ. ನಾಲ್ಕು ಅವಧಿ ಮುಗಿಸಿ ಐದಕ್ಕೆ ಪದಾಪರ್ಪಣೆ ಮಾಡುತ್ತಿರುವೆ. ವಿಕಸಿತ ಭಾರತದಲ್ಲಿ ವಿಕಸಿತ ಧಾರವಾಡ ಆಗುತ್ತಿದೆ. ಜನ ಮತ್ತೆ ಆಶೀರ್ವಾದ ಮಾಡ್ತಾರೆ. ಇದೊಂದು ದಾಖಲೆ ಆಗುತ್ತದೆ ಎಂದು ತಿಳಿಸಿದರು.
ಯಾರೂ ರೆಬೆಲ್ ಆಗುವುದಿಲ್ಲ
ಕೆಲ ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಿದ ವಿಚಾರವಾಗಿ ಮಾತನಾಡಿದ ಅವರು, ಯಾರೂ ರೆಬೆಲ್ ಆಗುವುದಿಲ್ಲ. ಎಲ್ಲರೊಂದಿಗೆ ಮಾತನಾಡುವೆ. 3 ರಿಂದ 4 ಸಲ ಟಿಕೆಟ್ ಪಡೆದವರಿದ್ದಾರೆ. ಅದರಲ್ಲಿ ಕೆಲವರನ್ನು ಮುಂದುವರಿಸಿದ್ದಾರೆ. ಆಯಾ ಕ್ಷೇತ್ರ ರಾಜಕೀಯ ನೋಡಿ ನಿರ್ಣಯ ಮಾಡಿದ್ದಾರೆ. ಎಲ್ಲರೂ ಪಕ್ಷಕ್ಕೆ ಅನಿವಾರ್ಯ. ಎಲ್ಲರೊಂದಿಗೆ ಮಾತನಾಡಿ ಅಸಮಾಧಾನ ಸರಿಪಡಿಸಲಾಗುವುದು ಎಂದು ಪ್ರಲ್ಹಾದ್ ಜೋಶಿ ಹೇಳಿದರು.