ಬೆಂಗಳೂರು : ಪಕ್ಷಕ್ಕೆ ವಿರೋಧ ಮಾಡೋರಿಗೆ ಹೈಕಮಾಂಡ್ ಮಣೆ ಹಾಕಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಅವರಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿ ನಾಯಕರ ಮೇಲೆ ವಿಶ್ವಾಸ ಇತ್ತು. ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ ಅವರು ಜವಾಬ್ದಾರಿ ವಹಿಸಿದ್ರು. ಪ್ರಾಮಾಣಿಕ ಕೆಲಸ ಮಾಡಿದ್ದೇನೆ ಎಂದರು.
ನಾನು ನಾಯಕರ ಮಾತಿಗೆ ಬದ್ದವಾಗಿದ್ದೇನೆ. ಚಿಕ್ಕಮಗಳೂರಿನಲ್ಲಿ ಅಭಿವೃದ್ಧಿ ಕೆಲಸ ಆಗಿದೆ. ಕೆಲವರು ಅದನ್ನ ವಿರೋಧಿಸಿದ್ದಾರೆ. ಕಲವರು ಪ್ರಾಯೋಜಿತ ಮಾಡಿ ವಿರೋಧ ಮಾಡಿದ್ರು. ಅವರೂ ಕೂಡ ಟಿಕೆಟ್ ಪಡೆಯುವಲ್ಲಿ ವಿಫಲ ಆಗಿದ್ದಾರೆ. ವಿರೋಧ ಮಾಡುವವರಿಗೆ ಟಿಕೆಟ್ ಸಿಗಲ್ಲ. ಇನ್ನಾದರೂ ವಿರೋಧ ಮಾಡೋರು ಪಾಠ ಕಲಿಯಬೇಕು ಎಂದು ಕುಟುಕಿದರು.
ಸೋಮಶೇಖರ್ ಮೋಸ ಮಾಡಿದ್ದಾರೆ
ನಾನು ಯಶವಂತಪುರ ಶಾಸಕಿಯಾಗಿ, ಸಚಿವೆ ಆಗಿ ಕೆಲಸ ಮಾಡಿದ್ದೆ. ಯಶವಂತಪುರದಲ್ಲಿ ಎಸ್.ಟಿ. ಸೋಮಶೇಖರ್ ಗೆಲ್ಲಿಸಿದ್ದೆವು. ಅವರು ಮೋಸ ಮಾಡಿದ್ದಾರೆ. ಎಲ್ಲರ ಆಶಿರ್ವಾದ ನನಗಿದೆ ಎಂದು ಹೇಳಿದರು.
ಯಡಿಯೂರಪ್ಪ ಭೇಟಿಯಾದ ಶೋಭಾ
ಟಿಕೆಟ್ ಪ್ರಕಟ ಬಳಿಕ ಮಾಜಿ ಸಿಎಂ ಡಾ.ಬಿ.ಎಸ್. ಯಡಿಯೂರಪ್ಪ ಅವರನ್ನು ಶೋಭಾ ಕರಂದ್ಲಾಜೆ ಭೇಟಿ ಮಾಡಿದರು. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿತಯಾಗಿ ಶೋಭಾ ಕರಂದ್ಲಾಜೆ ಅವರ ಹೆಸರು ಘೋಷಿಸಲಾಗಿದೆ. ಹೀಗಾಗಿ, ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿ ಧನ್ಯವಾದ ತಿಳಿಸಿದರು.