ಬೆಂಗಳೂರು : ಹಾಲಿ ಬಿಜೆಪಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಟಾಂಗ್ ನೀಡಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಆರು ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ನಾಯಕರು ಯಾರು ಅಂತ ಹೇಳಬೇಕಲ್ವಾ..? ಎಂದು ಕುಟುಕಿದರು.
ಮ್ಯಾಚ್ ಆಡೋಕೆ ಹೊರಟಿದ್ದೀರಿ. ಕ್ಯಾಪ್ಟನ್ ಯಾರು ಅಂತ ಹೇಳಬೇಕಲ್ವಾ..? ಕ್ಯಾಪ್ಟನ್ ಯಾರು ಅಂತ ಹೇಳುವ ಯೋಗ್ಯತೆ ಇದ್ರೆ ಬರಲಿ. ಇನ್ನೂ ಟಿಕೆಟ್ ಹಂಚಿಕೆಯೇ ಅಗಿಲ್ಲ. ಮೆಜಾರಿಟಿ ಬರೋಕೆ 272 ಬೇಕು. ಅಷ್ಟು ಸೀಟು ಅವರು ಸ್ಪರ್ಧೆಯೇ ಮಾಡ್ತಿಲ್ಲ. I.N.D.I.A ಒಕ್ಕೂಟ ಹುಟ್ಟು ಹಾಕಿದ್ದು ಯಾರು..? ಅವರು ಈಗ ಎಲ್ಲಿದ್ದಾರೆ..? ಎಂದು ವಾಗ್ದಾಳಿ ನಡೆಸಿದರು.
ಸುಳ್ಳು ಜಾಹೀರಾತು ನೀಡ್ತಿದೆ
ಕಾಂಗ್ರೆಸ್ ಸರ್ಕಾರ ಸುಳ್ಳು ಜಾಹೀರಾತು ನೀಡ್ತಿದೆ. ಕೇಂದ್ರ ಸರ್ಕಾರದ ಕೆಲಸವನ್ನು ನಮ್ಮದೇ ಅಂತ ತೋರಿಸ್ತಿದ್ದಾರೆ. ಅಷ್ಟು ಬರಗೆಟ್ಟು, ಮತಿ ಇಲ್ಲದಂತಾಗಿದೆ ಈ ಸರ್ಕಾರ. ಮುಂದೆ ಈ ರೀತಿ ಜಾಹೀರಾತು ನೀಡೋದಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನೂ ಹಾಕಲಿ. ಅನ್ನಭಾಗ್ಯ ಅಂತ ಸಿದ್ದರಾಮಯ್ಯ ಹೇಳಿದ್ರು. ಅದು ನಿಮ್ಮದಲ್ಲ, ಮೋದಿ ಅವರ ಯೋಜನೆ ಎಂದು ಚಾಟಿ ಬೀಸಿದರು.
ಕಾಂಗ್ರೆಸ್ಗೆ ಕಾಮಾಲೆ ಕಣ್ಣು
ಸಿಎಎಗೆ ಕಾಂಗ್ರೆಸ್ ವಿರೋಧ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ಗೆ ಮಾನವೀಯತೆಯ ಕೊರತೆ ಇದೆ. ಕಾಂಗ್ರೆಸ್ಗೆ ಕಾಮಾಲೆ ಕಣ್ಣು. ಅಲ್ಪಸಂಖ್ಯಾತ ಮತ ಒಲೈಕೆಗಾಗಿ CAA ವಿರೋಧ ಮಾಡ್ತಿದೆ. ಈ ಕಾಯ್ದೆಯನ್ನು ನಾವು ಸ್ವಾಗತ ಮಾಡ್ತೀವಿ. ಇದು ಕೇಂದ್ರದ ಕಾಯ್ದೆ. ಯಾರು ಒಪ್ಪಲಿ, ಬಿಡಲಿ ದೇಶದಲ್ಲಿ ಈ ಕಾಯ್ದೆ ಜಾರಿ ಮಾಡಲಿದೆ. ಪೌರತ್ವ ಕೊಡೋದು ಕೇಂದ್ರ ಸರ್ಕಾರ ಎಂದು ಆರ್. ಅಶೋಕ್ ಹೇಳಿದರು.