ಬೆಂಗಳೂರು : ಏಳೆಂಟು ಕ್ಷೇತ್ರಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡಲು ಕರೆದಿದ್ದಾರೆ ಅನ್ನೋದು ನನ್ನ ಭಾವನೆ. ಪ್ರತೀ ಕ್ಷೇತ್ರಕ್ಕೂ ಗೆಲ್ಲುವ ಅಭ್ಯರ್ಥಿ ಹಾಕುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ದೆಹಲಿ ಪ್ರವಾಸದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಹಾಗೂ ಬಸವರಾಜ ಬೊಮ್ಮಾಯಿ ಒಂದೇ ಫ್ಲೈಟ್ನಲ್ಲಿ ಹೋಗ್ತಿದ್ದೇವೆ ಎಂದು ತಿಳಿಸಿದರು.
ಮೈಸೂರು, ಉತ್ತರ ಕನ್ನಡ, ಹಾವೇರಿ, ಬೆಳಗಾವಿ, ದಕ್ಷಿಣ ಕನ್ನಡ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಕಗ್ಗಂಟು ವಿಚಾರವಾಗಿ ಪ್ರತಿಕ್ರಿಯಿಸಿದರು. ಎಲ್ಲ ಕ್ಷೇತ್ರಗಳ ಬಗ್ಗೆ ಎರಡೆರಡು ಬಾರಿ ವರಿಷ್ಠರು ಚರ್ಚೆ ಮಾಡಿದ್ದಾರೆ. ಅಂತಿಮವಾಗಿ ಎಲ್ಲವನ್ನೂ ಹೈಕಮಾಂಡ್ ನಿರ್ಧಾರಕ್ಕೇ ಬಿಟ್ಟಿದ್ದೇವೆ ಎಂದರು.
ನಮ್ಮಲ್ಲಿ ಕೆಲವು ನಾಯಕರ ಸಮಸ್ಯೆ ಇದೆ
ಕೇಂದ್ರ ನಾಯಕರು ಯಾರನ್ನೇ ಅಭ್ಯರ್ಥಿ ಮಾಡಿದರೂ ನಾವು ಕೆಲಸ ಮಾಡ್ತೇವೆ, ಗೆಲ್ಲಿಸ್ತೇವೆ. ಟಿಕೆಟ್ ಯಾರಿಗೇ ಕೊಟ್ರೂ ಕಾರ್ಯಕರ್ತರಿಗೆ ಸಮಸ್ಯೆ ಇಲ್ಲ. ಆದ್ರೆ, ಕೆಲವು ನಾಯಕರ ಸಮಸ್ಯೆ ಇದೆ. ಅದನ್ನ ಸ್ಥಳೀಯವಾಗಿ ನಾವು ಕೂತು ಚರ್ಚೆ ಮಾಡಿ ಸರಿ ಮಾಡ್ತೇವೆ ಎಂದು ಹೇಳಿದರು.
ಗೋ ಬ್ಯಾಕ್ ಶೋಭಾ ಅಭಿಯಾನ ಯಾಕೆ?
ಗೋ ಬ್ಯಾಕ್ ಶೋಭಾ ಅಭಿಯಾನ ವಿಚಾರವಾಗಿ ಮಾತನಾಡಿ, ಇದೆಲ್ಲ ಚುನಾವಣೆ ಮೇಲೆ ಪ್ರಭಾವ ಬೀರಲ್ಲ ಅನಿಸುತ್ತೆ. ರಾಷ್ಟ್ರೀಯ ನಾಯಕರು ಯಾವ ಮಾನದಂಡದ ಮೇಲೆ ಅಭ್ಯರ್ಥಿ ಆಯ್ಕೆ ಮಾಡ್ತಾರೆ ಅಂತ ನೋಡಬೇಕು. ಸರ್ವೆಗಳಲ್ಲಿ ಬಂದಿರುವ ಪ್ಲಸ್, ಮೈನಸ್ ಆಧರಿಸಿ ಟಿಕೆಟ್ ಕೊಡ್ತಾರೆ. ಇದರ ಜತೆಗೆ ನಮ್ಮ ಅಭಿಪ್ರಾಯಗಳನ್ನು ಕೇಳಿದ್ದಾರೆ ಎಂದರು. ಕೆಲವು ಕ್ಷೇತ್ರಗಳಿಗೆ ನಿರ್ದಿಷ್ಟ ಅಭ್ಯರ್ಥಿ ಹಾಕಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೀತಿಯದ್ದೇನೂ ನನ್ನ ಗಮನಕ್ಕೆ ಬಂದಿಲ್ಲ. ಎಲ್ಲರೂ ಸರ್ವಸಮ್ಮತವಾಗಿ ಚರ್ಚೆ ಮಾಡ್ತೀವಿ ಎಂದು ಆರ್. ಅಶೋಕ್ ತಿಳಿಸಿದರು.