ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡಿದೆ.
ಹೌದು, ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು ಅವರ ಜಾಗದಲ್ಲಿ ಈ ಬಾರಿ ಮೈಸೂರಿನಲ್ಲಿ ಯದುವೀರ್ ಒಡೆಯರ್ ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ.
ಕಳೆದ ಕೆಲ ದಿನಗಳಿಂದ ಯದುವೀರ್ ಒಡೆಯರ್ ಹೆಸರು ಕೇಳಿ ಬರುತ್ತಿದ್ದರೂ ಅದು ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಿರಲಿಲ್ಲ. ಆದರೆ ಈಗ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯದುವೀರ್ ಒಡೆಯರ್ ಹೆಸರು ಪ್ರಸ್ತಾಪವಾಗಿದೆ.
ಈಗಾಗಲೇ ಯದುವೀರ್ ಒಡೆಯರ್ ಅವರನ್ನು ಬಿಜೆಪಿ ಸಂಪರ್ಕಿಸಿದ್ದು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮೋದಾ ದೇವಿ ಗ್ರೀನ್ ಸಿಗ್ನಲ್ಗೆ ನಾಯಕರು ಕಾಯುತ್ತಿದ್ದಾರೆ. ಒಂದು ವೇಳೆ ಪ್ರಮೋದಾ ದೇವಿ ಒಪ್ಪಿಗೆ ನೀಡಿದರೆ ಯದುವೀರ್ ಒಡೆಯರ್ ರಾಜಕಿಯ ಪ್ರವೇಶಿಸಲಿದ್ದಾರೆ.
ಯಡಿಯೂರಪ್ಪ ಮತ್ತು ಆರ್ಎಸ್ಎಸ್ ನಾಯಕರೊಬ್ಬರ ಮೂಲಕ ಯದುವೀರ್ ಅವರನ್ನು ಮನವೊಲಿಕೆ ಮಾಡಲಾಗಿದೆ. ಮನವೊಲಿಕೆಯ ಬೆನ್ನಲ್ಲೇ ಪ್ರತಾಪ್ ಸಿಂಹ ಜೊತೆ ಯದುವೀರ್ ಒಡೆಯರ್ ಹೆಸರನ್ನು ಅಮಿತ್ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಶಿಫಾರಸ್ಸು ಮಾಡಲಾಗಿದೆ.
ಸಂಸದ ಪ್ರತಾಪ್ ಸಿಂಹಗೆ ಟಿಕೆಟ್ ಕೈತಪ್ಪುವ ಭೀತಿ ಎದುರಾಗಿದೆ. ಪಕ್ಷದ ಆಂತರಿಕ ಅಭಿಪ್ರಾಯ ಸಂಗ್ರಹದಲ್ಲಿ ಪ್ರತಾಪ್ ಸಿಂಹ ವಿರುದ್ಧ ಹೇಳಿಕೆಗಳು ಕೇಳಿ ಬರುತ್ತಿವೆ.ತಳ ಮಟ್ಟದ ಕಾರ್ಯಕರ್ತರನ್ನ ಕಡೆಗಣಿಸಿದ್ದಾರೆ.
ಸ್ಥಳೀಯ ನಾಯಕರನ್ನ ವಿಶ್ವಾಸಕ್ಕೆ ತಗೆದುಕೊಂಡಿಲ್ಲ.ಮಾಜಿ ಶಾಸಕರುಗಳ ಜೊತೆ ಮುಸುಕಿನ ಗುದ್ದಾಟ ಮುಂದುವರೆಸಿದ್ರು ಅನ್ನೋ ಅಭಿಪ್ರಾಯ ಕೇಳಿ ಬರುತ್ತಿದೆ. ಮೈಸೂರು- ಕೊಡಗು ಕ್ಷೇತ್ರದಿಂದ ಯಾರಿಗೆ ಟಿಕೇಟ್ ಕೊಟ್ರೂ ಗೆಲ್ತಾರೆ. ಇವ್ರಿಗೆ ಯಾಕೆ ಟಿಕೆಟ್ ಕೊಡ್ಬೇಕು. ಎರಡು ಬಾರಿ ಅವಕಾಶ ಕೊಟ್ಟಿರುವುದು ಸಾಕು.ಬೇರೆಯವರನ್ನೂ ಗುರುತಿಸಿ ಪಕ್ಷ ಟಿಕೆಟ್ ನೀಡಲಿ ಎಂಬ ಹೇಳಿಕೆಗಳು ಕೇಳಿ ಬರುತ್ತಿವೆ.