ಮೈಸೂರು : ನಾನು ಮೈಸೂರು-ಕೊಡಗು ಕ್ಷೇತ್ರ ಗೆದ್ದರೆ ಸಿಎಂ ಸಿದ್ದರಾಮಯ್ಯ ಸೀಟು ಅಲುಗಾಡುತ್ತೆ ಎಂದು ಸಂಸದ ಪ್ರತಾಪ್ ಸಿಂಹ ಕುಟುಕಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅವರನ್ನು ಸೋಲಿಸಲು ಆಗಲ್ಲ ಅಂತ ಕಾಂಗ್ರೆಸ್ ನಾಯಕರಿಗೂ ಗೊತ್ತಿದೆ. ಹೀಗಿರುವಾಗ ಕಾಂಗ್ರೆಸ್ಗೆ ನಮ್ಮ ಪಕ್ಷ ಹೇಗೆ ಸಪೋರ್ಟ್ ಮಾಡುತ್ತೆ ಎಂದು ಚಾಟಿ ಬೀಸಿದರು.
ಜನರಿಗೆ ರೂಲರ್ ಬೇಡ, ಬೇಕಿರೋದು ಕೆಲಸಗಾರ. ಪತ್ರಕರ್ತನಾಗಿದ್ದವನನ್ನು ಎರಡು ಬಾರಿ ಎಂಪಿ ಮಾಡಿದ್ದು ಬಿಜೆಪಿ. ಕಾಂಗ್ರೆಸ್ ಅವರಿಗೆ ಅಭ್ಯರ್ಥಿ ಹುಡುಕಲು ಆಗ್ತಾ ಇಲ್ಲ. ಇದರಿಂದ ಪ್ರತಾಪ್ ಸಿಂಹ ಶಕ್ತಿ ಏನು ಅಂತ ಕಾಂಗ್ರೆಸ್ ಅವರಿಗೆ ಗೊತ್ತಿದೆ. ನಾನು ಗೆದ್ದರೆ ಸಿದ್ದರಾಮಯ್ಯ ಅವರ ಕುರ್ಚಿ ಅಲ್ಲಾಡುತ್ತೆ ಎಂದು ಹೇಳಿದರು.
ನನ್ನ ರೀತಿ ಕೆಲಸ ಯಾರು ಮಾಡಿಲ್ಲ
ಎಲ್ಲರಿಗೂ ಟಿಕೆಟ್ ಕೇಳುವ ಹಕ್ಕಿದೆ. 10 ವರ್ಷ ನಿಯತ್ತಾಗಿ ಕೆಲಸ ಮಾಡಿದ್ದೇನೆ. ಪ್ರೀತಿಸುವವರು ಅಷ್ಟೇ ಪ್ರಮಾಣದಲ್ಲಿ ಇದಾರೆ. ರಾಜಕೀಯದಲ್ಲಿ ದ್ವೇಷ ಅಸೂಯೆ ಇದ್ದೆ ಇರುತ್ತೆ. ಚಾಲೆಂಜ್ ಮಾಡಿ ಹೇಳ್ತೀನಿ ನನ್ನ ರೀತಿ ಕೆಲಸ ಯಾರು ಮಾಡಿಲ್ಲ. ಮೈಸೂರು ಕೊಡಗು ಜನರ ಪ್ರೀತಿಯ ನಡುವೆ ಅಸೂಯೆ ಯಾವುದು ನಿಲ್ಲಲ್ಲ. ಪಾರ್ಟಿಯ ಕಾರ್ಯಕರ್ತರು ಯಾರು ಅಭ್ಯರ್ಥಿ ಆಗಬೇಕೆಂದು ಹೇಳಿದ್ದಾರೆ. ಅದರ ಶೀಟ್ ನೋಡಿದ್ರೆ ಗೊತ್ತಾಗುತ್ತೆ ಎಂದು ತಿಳಿಸಿದರು.
ಬಿಜೆಪಿ ಖುಷಿ ಪಡೋ ಎಂಪಿ ನಾನೇ
ಹಿಂದೂ ಕಾರ್ಯಕರ್ತರಿಗೆ ಅನ್ಯಾಯವಾದಗ ನಿಂತಿದ್ದು ನಾನು. ಬಿಜೆಪಿ ಕಾರ್ಯಕರ್ತರು ಖುಷಿ ಪಡುವ ಎಂಪಿ ಇದ್ರೆ ಅದು ನಾನೇ. ಈ ವಿಚಾರವಾಗಿ ಪ್ರತಾಪ್ ಸಿಂಹ ಎರಡು ಕೇಸ್ ಹಾಕಿಸಿಕೊಂಡಿದ್ದಾನೆ. ಪ್ರತಾಪ್ ಸಿಂಹ ರೂಲರ್ ಅಲ್ಲ, ಕೆಲಸಗಾರ. ಈ ಭಾಗದಲ್ಲಿ ಹನುಮ ಜಯಂತಿ ಆಗುತ್ತಿದ್ರೆ ಅಂದ್ರೆ ಅದಕ್ಕೆ ಪ್ರತಾಪ್ ಸಿಂಹ ಕಾರಣ. ಜನರು ನನ್ನ ಕೈ ಹಿಡಿಯಲು ರೆಡಿ ಇದ್ದಾರೆ. ಪಕ್ಷ ನನ್ನ ಕೈ ಬಿಡಲ್ಲ ಎಂಬ ನಂಬಿಕೆ ಇದೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.