ಹಾವೇರಿ : ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪೈಪೋಟಿ ತಾರಕಕ್ಕೇರಿದೆ. ಬಸವರಾಜ ಬೊಮ್ಮಾಯಿ ಈಗಾಗಲೇ ಸಿಎಂ ಆಗಿದ್ದಾರೆ, ಟಿಕೆಟ್ ನನಗೇ ಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ಪಟ್ಟು ಹಿಡಿದಿದ್ದಾರೆ.
ಹಿರೇಕೇರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೇ ಟಿಕೆಟ್ ಕೊಡಬೇಕು. ನಾವು ತ್ಯಾಗ ಮಾಡಿ ಬಂದವರು, ಮನೆಯಲ್ಲಿ ಕೂತುಕೊಂಡಿದ್ದೀವಿ ಎಂದು ಹೇಳಿದ್ದಾರೆ.
ನಮಗೆ ಹೆದರಿಸೋದು ಬೆದರಿಸೋದು ಗೊತ್ತಿಲ್ಲ. ಸೈಲೆಂಟ್ ಇದೇವೆ ಎಂದರೆ ಅದು ನಮ್ಮ ದೌರ್ಬಲ್ಯ ಅಂತ ಭಾವಿಸಬಾರದು. ಈಗಾಗಲೇ ಬೊಮ್ಮಾಯಿ ಸಿಎಂ ಆಗಿದ್ದಾರೆ. ನಾನು ಹಾವೇರಿ-ಗದಗ ಜಿಲ್ಲೆಗಳ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ, ನನಗೆ ಟಿಕೆಟ್ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
ನನಗೆ ಹೆಬ್ಬಾರ್, ಸೋಮಶೇಖರ್ ಹಾದಿ ಬೇಕಾಗಿಲ್ಲ
ಬಿ.ವೈ. ವಿಜಯೇಂದ್ರ ಹಾಗೂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇನೆ. ನಾನು ಟಿಕೆಟ್ ಬೆನ್ನತ್ತಿಕೊಂಡು ಹೋಗೋನಲ್ಲ. ನನಗೆ ಕೊಡಬೇಕು ಅಂತ ವಾದ ಮಾಡ್ತಾ ಇದ್ದೇನೆ. ಸಿಗಲಿಲ್ಲ ಎಂದರೆ ಕಾರ್ಯಕರ್ತರ ಜೊತೆ ಮಾತಾಡ್ತೀನಿ. ನನಗೆ ನಂದೇ ಹಾದಿ ಇದೆ. ನನಗೆ ಹೆಬ್ಬಾರ್, ಸೋಮಶೇಖರ್ ಹಾದಿ ಬೇಕಾಗಿಲ್ಲ. ಕೃಷಿ ಸಚಿವನಾಗಿ ರೈತರ ಹಿತ ಕಾದಿದ್ದೇವೆ. ಕಾಂತೇಶ್ ಅವರ ಬಗ್ಗೆ ಮಾತಾಡೋಕೆ ಹೋಗಲ್ಲ. ಕಾಂತೇಶ್ಗೂ ನನಗೆ ಸಂಬಂಧ ಇಲ್ಲ ಎಂದು ಬಿ.ಸಿ. ಪಾಟೀಲ್ ಹೇಳಿದ್ದಾರೆ.