Monday, May 20, 2024

ಸುಮಲತಾ ನಮ್ಗೆ ಬರೀ ಬೆಂಬಲ ಕೊಟ್ಟಿದ್ದಾರೆ ಅಷ್ಟೇ.. ಪಕ್ಷಕ್ಕೆ ಸೇರಿಲ್ಲ : ಆರ್. ಅಶೋಕ್

ಬೆಂಗಳೂರು : ಸಂಸದೆ ಸುಮಲತಾ ಅಂಬರೀಶ್ ನಮಗೆ ಬರೀ ಬೆಂಬಲ ಕೊಟ್ಟಿದ್ದಾರೆ ಅಷ್ಟೇ.. ಆದರೆ, ಅವರು ಇನ್ನೂ ಬಿಜೆಪಿ ಪಕ್ಷಕ್ಕೆ ಸೇರಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಟಿ ಸೇರಬೇಕಿದ್ದವರು ಆರು ತಿಂಗಳ ಮುಂಚೆ ಸೇರಬೇಕಿತ್ತು ಎಂದು ತಿಳಿಸಿದರು.

ಸುಮಲತಾ ಅಂಬರೀಶ್ ಅವರ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಮಾಡ್ತಾರೆ. ಮಂಡ್ಯದಲ್ಲಿ ನಮಗೆ ಮತಗಳಿಕೆ ಜಾಸ್ತಿಯಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಇಬ್ಬರ ಮೈತ್ರಿಯಿಂದ ಶಕ್ತಿ ಜಾಸ್ತಿ ಆಗಿದೆ. ಹೀಗಾಗಿ, ಈ ಬಾರಿ ಮಂಡ್ಯದಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ

ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಎಡಬಿಡಂಗಿ ಸರ್ಕಾರ. ಮನಸ್ಸಿಗೆ ಬಂದಂತೆ ಐದು ಗ್ಯಾರಂಟಿಗಳನ್ನು ಘೋಷಿಷಿ ಅದನ್ನು ಪೂರ್ಣ ಪ್ರಮಾಣದಲ್ಲಿ ಜಾರಿ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಬೇಜವಬ್ದಾರಿಯಿಂದ ಕೆಆರ್​ಎಸ್ ನೀರನ್ನು ತಮಿಳುನಾಡಿಗೆ ಬಿಟ್ಟು ಕೊಟ್ಟಿದ್ದಾರೆ. ಇವತ್ತು ಬೆಂಗಳೂರಲ್ಲಿ ನೀರಿನ ಸಮಸ್ಯೆ ಆಗಿರೋದಕ್ಕೆ ಇದೇ ಕಾರಣ. ಇಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ಹಣಕಾಸಿನ ಪರಿಸ್ಥಿತಿ ಪಾತಳಕ್ಕೆ ಇಳಿದಿದೆ

ಬೆಂಗಳೂರಿನ ವಾರ್ಡ್ ಮಟ್ಟದಲ್ಲಿ ಒಂದು ಸಭೆಯನ್ನೂ ಮಾಡಿಲ್ಲ. ನಾವು ಕೋವಿಡ್ ಸಂದರ್ಭದಲ್ಲಿ ಸಭೆ ಮಾಡಿ ಸಮರ್ಥವಾಗಿ ನಿಭಾಯಿಸಿದ್ದೇವೆ. ರಾಜ್ಯದಲ್ಲಿ ಕುಡಿಯುವ ನೀರನ್ನು ಒದಗಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ರಾಜ್ಯದ ಹಣಕಾಸಿನ ಪರಿಸ್ಥಿತಿ ಪಾತಳಕ್ಕೆ ಇಳಿದಿದೆ. ಕೇಂದ್ರ ಸರ್ಕಾರದ ಮೇಲೆ ಹೇಳ್ತೀರಲ್ಲ ನಿಮಗೆ‌ ನಾಚಿಕೆ ಆಗಲ್ವಾ..? ಎಂದು ಆರ್. ಅಶೋಕ್ ಹರಿಹಾಯ್ದರು.

RELATED ARTICLES

Related Articles

TRENDING ARTICLES