ಚಿಕ್ಕಮಗಳೂರು : ಪಕ್ಷ ಹಾಗೂ ದೇಶದ ಹಿತಕ್ಕಾಗಿ ಬಹಳ ವಿಷಯಗಳನ್ನು ನುಂಗಿಕೊಂಡಿದ್ದೇನೆ ಎಂದು ಮಾಜಿ ಸಚಿವ ಸಿ.ಟಿ. ರವಿ ಅಸಮಾಧಾನ ಹೊರಹಾಕಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಷ್ಟ್ರದ ಹಿತಕ್ಕಾಗಿ ನರೇಂದ್ರ ಮೋದಿಯವರು ಮೂರನೇ ಬಾರಿ ಪ್ರಧಾನಿ ಆಗಬೇಕು ಅಷ್ಟೇ ಎಂದು ಹೇಳಿದ್ದಾರೆ.
ನನ್ನ ಮನಸ್ಸಿನಲ್ಲಿ ಬಹಳ ಭಾವನೆಗಳಿವೆ, ಹೇಳುವುದಕ್ಕೂ ಬಹಳ ವಿಷಯಗಳು ಇದೆ. ಇದು ಸೂಕ್ತ ಸಮಯವಲ್ಲ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ, ಸಮಯ ಬರಲಿ ಎಲ್ಲಾ ಹೇಳುತ್ತೇನೆ. ನಮ್ಮ ಗುರಿ ಒಂದೇ, ಮೋದಿ ಮತ್ತೊಮ್ಮೆ ದೇಶದ ಪ್ರಧಾನಿ ಆಗಬೇಕು ಎಂದು ತಿಳಿಸಿದ್ದಾರೆ.
ಸಚಿವೆ ಶೋಭಾ ಕರಂದ್ಲಾಜೆಗೆ ಟಿಕೆಟ್ ಫಿಕ್ಸ್
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ಗಾಗಿ ಬಿಜೆಪಿ ಪಾಳಯದಲ್ಲೇ ಭಾರಿ ಪೈಪೋಟಿ ಏರ್ಪಟ್ಟಿದೆ. ನಿತ್ಯ ಮಹತ್ವದ ಬೆಳವಣಿಗೆಗಳೂ ನಡೆಯುತ್ತಿವೆ. ಈ ಬಾರಿಯೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್ ಫಿಕ್ಸ್ ಆಗಿದೆ. ಅವರಿಗೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಕೃಪಾಕಟಾಕ್ಷವೂ ಇದೆ. ಇದರಿಂದಲೇ ಸಿ.ಟಿ. ರವಿ ಅಸಮಾಧಾನ ಹೊರಹಾಕಿದ್ದಾರೆ.