ಕಲಬುರಗಿ : ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿದ್ದನ್ನು ನಾನು ಸಮರ್ಥಿಸುವುದಿಲ್ಲ. ಅವರ ವಿರುದ್ಧ ಆಕ್ಷನ್ ತಗೋಬೇಕು, ಜೈಲಿಗೆ ಹಾಕಬೇಕು. ಎಲ್ಲಾ ರೀತಿಯ ಶಿಕ್ಷೆ ಆಗಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಆಡಳಿತದಲ್ಲಿ ಇದ್ದಾಗ 6 ಕಡೆ ಸರಣಿ ಬಾಂಬ್ ಬ್ಲಾಸ್ಟ್ ಆಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ, ಮಲ್ಲೇಶ್ವರದಲ್ಲಿ, ವಿಮಾನ ನಿಲ್ದಾಣದಲ್ಲಿ, ಮಂಗಳೂರಿನಲ್ಲಿ. ಬಿಜೆಪಿ ಸರ್ಕಾರ ಇದ್ದಾಗ ಬ್ಲಾಸ್ಟ್ ಆಗಿದ್ದವು ಎಂದು ಕುಟುಕಿದರು.
ಬಿಜೆಪಿಗೆ ಕಂಪೇರ್ ಮಾಡಿದ್ರೆ ಬಾಂಬ್ ಬ್ಲಾಸ್ಟ್, ಕ್ರಿಮಿನಲ್ ಆಕ್ಟಿವಿಟಿ ನಮ್ಮ ಅವಧಿಯಲ್ಲಿ ಬಹಳ ಕಡಿಮೆ ಆಗಿದೆ. ಮುಂದೆ ಸಂಪೂರ್ಣ ನಿಯಂತ್ರಣ ಮಾಡುತ್ತೇವೆ. ಪೊಲೀಸರಿಗೆ ಏನು ಕೆಲಸ ಮಾಡಬೇಕು ಗೊತ್ತಿದೆ. ಬಿಜೆಪಿಯವರನ್ನೆಲ್ಲ ಕೇಳಿಕೊಂಡು ಕೆಲಸ ಮಾಡಬೇಕಾ? ತನಿಖೆಯಲ್ಲಿ ಎಷ್ಟು ಜನ ಇದಾರೆ ಗೊತ್ತಾಗುತ್ತೆ. ನಾನೇನು ತನಿಖಾಧಿಕಾರಿನಾ? ಘೋಷಣೆ ಕೂಗಿಲ್ಲ ಅಂತ ಯಾರು ಹೇಳಿದ್ರೋ ಅವರನ್ನು ಕೇಳಿ ಎಂದು ಗರಂ ಆದರು.
ಬಿಜೆಪಿ ಇದ್ದಾಗ 6 ಕಡೆ ಬ್ಲಾಸ್ಟ್ ಆಗಿತ್ತು
ಬಿಜೆಪಿ ಕಾಲದಲ್ಲಿಯೇ ಬೆಂಗಳೂರು ಭಯೋತ್ಪಾದಕರ ಅಡ್ಡೆ ಆಗಿತ್ತು. 6 ಕಡೆ ಬಾಂಬ್ ಬ್ಲಾಸ್ಟ್ ಆಗಿತ್ತು. ಅವಾಗ ಭತೋತ್ಪಾದಕರ ಅಡ್ಡೆ ಆಗಿತ್ತು. ನಮ್ಮ ಸರ್ಕಾರ ಬಂದ ಮೇಲೆ ಒಂದೇ ಕಡೆ ಆಗಿದ್ದು, ಅದನ್ನೂ ನಿಯಂತ್ರಣ ಮಾಡ್ತೇವೆ. ಅಲ್ಪಸಂಖ್ಯಾತರ ಓಲೈಕೆ ಎಲ್ಲಾ ಸುಳ್ಳು. ದೇಶದಲ್ಲಿರುವ ಜನ ಎಲ್ಲಾ ಒಂದೇ ಅನ್ನೋರು ನಾವು. ವೋಟಿಗಾಗಿ ಬಿಜೆಪಿಯವರು ಜನರನ್ನು ಡಿವೈಡ್ ಮಾಡ್ತಿದಾರೆ. ಬಿಜೆಪಿ ತರ ನಮಗೆ ಸುಳ್ಳು ಹೇಳಲು ಬರಲ್ಲ. ಅವರಿಗೆ ಸುಳ್ಳು ಹೇಳದಿದ್ರೆ ತಿಂದ ಅನ್ನ ಜೀರ್ಣ ಆಗಲ್ಲ. ನಮಗೆ ಸುಳ್ಳು ಹೇಳಲು ಬರಲ್ಲ, ಗಾಂಧಿ ಫಾಲೋವರ್ಸ್ ನಾವು ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಆಗ ಬಿಜೆಪಿಯವರು ಮಣ್ಣು ತಿಂದಿದ್ರಾ?
ಮಂಡ್ಯದಲ್ಲಿ ಎರಡು ವರ್ಷದ ಹಿಂದೆ ಪಾಕಿಸ್ತಾನ್ ಜಿಂದಾಬಾದ್ ಅಂತ ಒಬ್ಬ ಘೋಷಣೆ ಕೂಗ್ತಾನೆ. ಆಗ ಇನ್ನೊಬ್ಬ ಆತನ ಬಾಯಿ ಮುಚ್ಚಿಸ್ತಾನೆ. ಆಗ ಬಿಜೆಪಿಯವರು ಎಲ್ಲಿ ಹೋಗಿದ್ರು? ಮಣ್ಣು ತಿಂದಿದ್ರಾ? ನಾವಾದ್ರೆ ತಕ್ಷಣವೇ ಅರೆಸ್ಟ್ ಮಾಡಿದಿವಿ, ಬಿಜೆಪಿಯವರು ಏನು ಮಾಡಿದಾರೆ? ಎಂದು ರಾಮಲಿಂಗಾರೆಡ್ಡಿ ತಿರುಗೇಟು ನೀಡಿದರು.