ತುಮಕೂರು : ಪಾಕಿಸ್ತಾನ ಪರ ಘೋಷಣೆ ಕೂಗಿದ ಮೂವರ ಬಂಧನ ವಿಚಾರ ಕುರಿತು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಅರೆಸ್ಟ್ ಆಗಿದ್ದಾರ? ಎಂದು ಮಾಧ್ಯಮದವರನ್ನೇ ಪ್ರಶ್ನೆ ಮಾಡಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಗೊತ್ತಿಲ್ಲ, ಬೆಳಗ್ಗೆಯಿಂದಲೂ ನಿಮ್ಮ ಜೊತೆಯಲ್ಲೇ ಇದ್ದೇನೆ. ಈ ವಿಷಯ ಕುರಿತು ಯಾವುದೇ ಫೋನ್ ಬಂದಿಲ್ಲ. ವಿಧಾನಸೌಧ ಪೊಲೀಸರು ಅರೆಸ್ಟ್ ಮಾಡಿದ್ದಾರಾ..? ಎಂದ ಅವರು, ಹೌದಾ? ಎಂದು ಮತ್ತೊಮ್ಮೆ ಉದ್ಗಾರ ತೆಗೆದಿದ್ದಾರೆ.
ಪೊಲೀಸರಿಗೆ ಫ್ರೀಡಂ ಕೊಟ್ಟಿದ್ದೇವೆ, ಅವರ ಕೆಲಸ ಅವರು ಮಾಡಿದ್ದಾರೆ. ಬೆಳಗ್ಗೆಯಿಂದ ನನಗೆ ಯಾವುದೇ ಮಾಹಿತಿ ಇಲ್ಲ, ನಾನು ಕೂಡ ನಿಮ್ಮ ಜೊತೆ ಕುಳಿತಿದ್ದೇನೆ. ನೀವೇ ನೋಡಿದ್ದೀರಲ್ಲ, ನಾನು ಎರಡು ಗಂಟೆ ಏನಾದರೂ ನಿಮ್ಮಿಂದ ತಪ್ಪಿಸಿಕೊಂಡು ಹೋಗಿದ್ದನಾ? ಅರೆಸ್ಟ್ ಆಗಿರುವ ಬಗ್ಗೆ ವೆರಿಫೈ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕನ್ಫರ್ಮ್ ಆದ್ರೆ, ಆಗ ನಾನು ಕನ್ಫರ್ಮ್ ಮಾಡ್ತೀನಿ
ನಾನು ಹೋಂ ಮಿನಿಸ್ಟರ್ ಆಗಿ ಸುಮ್ಮನೆ ಹೆಂಗೆ ಅಂದರೆ ಹಂಗೆ ಹೇಳೋದಕ್ಕೆ ಆಗಲ್ಲ. ಅರೆಸ್ಟ್ ಆಗಿದ್ದರೆ ಅವರ ಕೆಲಸ ಅವರು ಮಾಡಿರುತ್ತಾರೆ. ನಾವು ಯಾವ ಯಾವ ರೀತಿ ಮಾರ್ಗದರ್ಶನ ಕೊಟ್ಟಿದ್ದೆವು, ಅದೇ ರೀತಿ ವಿಧಾನಸೌಧ ಪೊಲೀಸರು ತನಿಖೆ ಮಾಡಿರುತ್ತಾರೆ. ನಾನು ಈಗ ಬೆಂಗಳೂರಿಗೆ ಹೋಗುತ್ತೇನೆ. ಅರೆಸ್ಟ್ ಆದ ಬಗ್ಗೆ ಕನ್ಫರ್ಮ್ ಆದ್ರೆ, ಅವಾಗ ನಾನು ಕನ್ಫರ್ಮ್ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನ್ ಅಲ್ಲ.. ನಾಸಿರ್ ಸಾಬ್ ಜಿಂದಾಬಾದ್
ನಾನೇನು ಮುಚ್ಚಿ ಇಡೋದಕ್ಕೆ ಆಗಲ್ಲ. ಅದರ ಅಂತಿಮ ವರದಿ ನೋಡುತ್ತೇನೆ. ಪಾಕಿಸ್ತಾನ್ ಜಿಂದಾಬಾದ್ ಅಲ್ಲ ನಾಸಿರ್ ಸಾಬ್ ಜಿಂದಾಬಾದ್ ಎಂದು ಯಾರೋ ಸಚಿವರು ಸಮರ್ಥನೆ ಮಾಡಿಕೊಂಡಿರಬಹುದು. ನಾನು ಹೇಳಿದ್ನಾ? ಅಥವಾ ಮುಖ್ಯಮಂತ್ರಿಗಳು ಹೇಳಿದ್ದಾರ? ಯಾರೋ ಹೇಳಿದ್ದಾರೆ. ಅಧಿಕೃತ ಯಾವುದು ಅಂದರೆ ಮುಖ್ಯಮಂತ್ರಿಗಳು, ಗೃಹ ಸಚಿವರು, ಡಿಜಿ -ಐಜಿ ಹೇಳಿರುವುದು ಎಂದು ಹೇಳಿದ್ದಾರೆ.