ಉತ್ತರಕನ್ನಡ : ಶಿರಸಿಯ ಸಿಪಿ ಬಜಾರ್ ಮಸೀದಿ ಸಹ ನಮ್ಮದೇನೆ. ನ್ಯಾಯಾಲಯದಲ್ಲಿ ಪ್ರಕರಣ ನಡೀತಿದೆ. ಭಟ್ಕಳದ ಚಿನ್ನದಪಳ್ಳಿ ಮಸೀದಿ ಕೆಳದಿಯ ಅಘೋರೇಶ್ವರ ದೇವಸ್ಥಾನದ ಶಿಖರ ಅದು ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.
ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಮಾವಳ್ಳಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಎಲ್ಲೆಲ್ಲಿ ನಮ್ಮ ಸಮಾಜದ ಮೇಲೆ ಅಪಮಾನವಾಗಿದೆ, ಇತಿಹಾಸದಲ್ಲಿ ಅವಹೇಳನ ಮಾಡಲಾಗಿದೆ ಅದೆಲ್ಲದಕ್ಕೂ ಪರಿಮಾರ್ಜನೆ ಆಗಲೇಬೇಕು ಎಂದು ತಿಳಿಸಿದರು.
ಒಂದು ಚುನಾವಣೆಯಲ್ಲ, ಶತಮಾನಗಳ ಕಾಲ ಬಿಜೆಪಿ ಗೆಲ್ಲುತ್ತಲೇ ಇರಬೇಕು. ನಾವು ಇರ್ತಿವೋ, ಬಿಡ್ತಿವೋ ಗೊತ್ತಿಲ್ಲ ಕಣ್ರಿ. ಎಷ್ಟೋ ಜನ ನಮ್ಮದೇ ಕ್ಷೇತ್ರದಲ್ಲಿ ಬಂದು ತಮಗೇ ಟಿಕೆಟ್ ಸಿಕ್ಕಿದೆ ಎಂದು ಓಡಾಡುತ್ತಿದ್ದಾರೆ. ಕಾಂಗ್ರೆಸ್ನಲ್ಲೇ ಇನ್ನೂ ಕನ್ಫೂಷನ್ನಲ್ಲಿದ್ದಾರೆ. ಬಿಜೆಪಿಯಲ್ಲಿ ಎಲ್ಲರೂ ಟಿಕೆಟ್ ಜೇಬಿನಲ್ಲೇ ಇಟ್ಕೊಂಡು ಓಡಾಡ್ತಿದಾರೆ. ನೋಡಪ್ಪಾ ನನ್ನ ಕೈಯಲ್ಲಂತೂ ಟಿಕೆಟ್ ಇಲ್ಲ, ಕ್ಯಾಂಡಿಡೇಟ್ ಯಾರಂತ ಡಿಸೈಡ್ ಮಾಡ್ತಾರೋ ಅವರನ್ನು ಗೆಲ್ಲಿಸೋಣ ಎಂದರು.
ಆರು ಸಲ ಗೆಲ್ಲಿಸಿದ್ದೀರಿ, ಇದಕ್ಕಿಂತ ಮತ್ತೇನು ಬೇಕು
ನಾನು ಕ್ಯಾಂಡಿಡೇಟ್ ಅಂತ ಇಲ್ಲಿಗೆ ಬಂದಿಲ್ಲ, ನನ್ನ ಹತ್ತಿರ ಅಂತೂ ಟಿಕೆಟ್ ಇಲ್ಲ ಇವತ್ತು. ಬಿಜೆಪಿ ಯಾರನ್ನ ಕ್ಯಾಂಡಿಡೇಟ್ ಅಂತ ನಿಲ್ಲಿಸುತ್ತೆ ಅಂತವರನ್ನೇ ಗೆಲ್ಲಿಸಬೇಕು. ಆರು ಸಲ ಗೆಲ್ಲಿಸಿದ್ದೀರಿ, ಇದಕ್ಕಿಂತ ಜಾಸ್ತಿ ಮತ್ತೇನು ಬೇಕು. ಆಸೆ ಪಡುವುದಕ್ಕೂ ಒಂದು ಮಿತಿಯಿರತ್ತೆ, ಅದಕ್ಕಿಂತ ಜಾಸ್ತಿ ಆಸೆ ಪಡಬಾರದು. ಭಗವಂತ ಮೆಚ್ಚುವುದಿಲ್ಲ. ಅನಾರೋಗ್ಯದ ಕಾರಣದಿಂದ ರಾಜಕೀಯಕ್ಕೆ ಬರಲು ಆಗುವುದಿಲ್ಲ ಎಂದು ಕೈಬಿಟ್ಟಿದ್ದೆ. ಆದರೂ ಕ್ಷೇತ್ರದ ವಿವಿಧೆಡೆಯಿಂದ ಕಾರ್ಯಕರ್ತರು ಬರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಅನಂತಕುಮಾರ ಹೆಗಡೆ ಹೇಳಿದರು.