ಬೆಂಗಳೂರು: ನಗರದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟದಿಂದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಲ್ಲಿ ಆತಂಕ ಹೆಚ್ಚಿದೆ. ಇತ್ತೀಚೆಗಿನ ಬಜೆಟ್ನಲ್ಲಿ ಮಧ್ಯರಾತ್ರಿ 1 ಗಂಟೆಯವರೆಗೆ ರೆಸ್ಟೋರೆಂಟ್ ಗಳು ತೆರೆದಿರಲು ಅನುಮತಿ ನೀಡುವುದಾಗಿ ಸರ್ಕಾರ ಘೋಷಿಸಿತ್ತು, ಆದರೆ ಬ್ಲಾಸ್ಟ್ ಹಿನ್ನೆಲೆಯಲ್ಲಿ ಮಧ್ಯರಾತ್ರಿ ವರೆಗೆ ಹೋಟೆಲ್ ತೆರೆಯಲು ಅವಕಾಶ ಸಿಗುವುದೇ ಎಂದು ಮಾಲೀಕರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ: ರಾಮೇಶ್ವರಂ ಕೆಫೆ ಸ್ಪೋಟ: ಆರೋಪಿ ಪತ್ತೆಗೆ 10 ತನಿಖಾ ತಂಡ ಸಜ್ಜು
ಈ ಕುರಿತು ಹೋಟೆಲ್ ಮತ್ತು ರೆಸ್ಟೋರೆಂಟ್ಗಳ ಅಸೋಷಿಯೇಷನ್ ಮೂಲಗಳು ಹೇಳುವ ಪ್ರಕಾರ ನಾವು ಈ ಹಿಂದೆ ಹಗಲಿರುಳು ಕಾರ್ಯನಿರ್ವಹಿಸಲು ಅನುಮತಿ ಕೋರಿ ಅನೇಕ ಪ್ರಯತ್ನಗಳನ್ನು ಮಾಡಿದ್ದೆವು, ಆದರೆ ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ನಿರಾಕರಿಸಲಾಗಿತ್ತು. ಈಗ ಈ ಸ್ಫೋಟದೊಂದಿಗೆ ನಮಗೆ ಮತ್ತಷ್ಟು ಹಿನ್ನಡೆಯಾಗಿದೆ ಎಂದು ಹೇಳಿವೆ.
ರಾಮೇಶ್ವರಂ ಕೆಫೆಯಲ್ಲಿ ನಡೆದಂಥ ಬಾಂಬ್ ಬ್ಲಾಸ್ಟ್ ಘಟನೆಗಳು ಯಾವುದೇ ಸಮಯದಲ್ಲಿ ಮತ್ತು ಯಾವುದೇ ಸ್ಥಳದಲ್ಲಿ ಸಂಭವಿಸಬಹುದು ಎಂದು ಬೆಂಗಳೂರು ಮೂಲದ ರೆಸ್ಟೋರೆಂಟ್ ಮಾಲೀಕರು ಹೇಳಿದ್ದಾರೆ. ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳು ಸುರಕ್ಷಿತವಲ್ಲ ಎಂದು ಇದರ ಅರ್ಥವಲ್ಲ. ಸೂಕ್ತ ಭದ್ರತಾ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ ಎಂದಿದ್ದಾರೆ.