ದೆಹಲಿ: ತಮ್ಮ ಬಗ್ಗೆ ತಪ್ಪುದಾರಿಗೆಳೆಯುವ ಮತ್ತು ಅವಹೇಳನಕಾರಿ ಸುದ್ದಿಗಳನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಹಂಚಿಕೊಂಡಿರುವ ಆರೋಪದ ಮೇಲೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರಿಗೆ ನೋಟಿಸ್ ಕಳುಹಿಸಿದ್ದಾರೆ.
ಇದನ್ನೂ ಓದಿ: ಗೌತಮ್ ಗಂಭೀರ್ ರಾಜಕೀಯಕ್ಕೆ ವಿದಾಯ
ಮೈಕ್ರೋ ಬ್ಲಾಗಿಂಗ್ ಜಾಲತಾಣ ಎಕ್ಸ್ನಲ್ಲಿ ಕಾಂಗ್ರೆಸ್ನ ಅಧಿಕೃತ ಖಾತೆಯಿಂದ ವಿಡಿಯೊ ಪೋಸ್ಟ್ ಆಗಿರುವ ಬಗ್ಗೆ ತಿಳಿದು ತಮ್ಮ ಕಕ್ಷಿದಾರರಿಗೆ ಆಘಾತವಾಗಿದೆ ಎಂದು ಗಡ್ಕರಿ ಅವರ ವಕೀಲ ಬಲೇಂದರ ಶೇಖರ್ ಹೇಳಿದ್ದಾರೆ.
ಗಡ್ಕರಿಯವರು ‘ದಿ ಲಲ್ಲಾಂಟಾಪ್’ ವೆಬ್ ಪೋರ್ಟಲ್ಗೆ ನೀಡಿರುವ ಸಂದರ್ಶನದ 19 ಸೆಕೆಂಡುಗಳ ವಿಡಿಯೋ ತುಣುಕನ್ನು ಖರ್ಗೆ ಮತ್ತು ರಮೇಶ್ ಅವರು ಉದ್ದೇಶಪೂರ್ವಕವಾಗಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಗಡ್ಕರಿ ಅವರ ಮಾತುಗಳನ್ನು ತಿರುಚಲಾಗಿದ್ದು, ಸಂದರ್ಭೋಚಿತ ಉದ್ದೇಶ ಮತ್ತು ಅರ್ಥವನ್ನು ಮರೆಮಾಚಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ.