ತುಮಕೂರು : ಎಣ್ಣೆ ನಶೆಯಲ್ಲಿ ಅರೆನಗ್ನನಾಗಿ ಯುವಕ ಹುಚ್ಚಾಟ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ತಾಲ್ಲೂಕಿನ ಕಚೇರಿಯಲ್ಲಿ ನಡೆದಿದೆ. ಪೊಲೀಸರಿಗೆ ತೊಡೆತಟ್ಟಿ ಯುವಕ ಕಿರಿಕ್ ಮಾಡಿದ್ದಾನೆ.
ತುರುವೆಕೆರೆ ಪಟ್ಟಣದ ವಿನೋಭಾ ನಗರ ನಿವಾಸಿ ರವಿ ಎಂಬಾತ ರಂಪಾಟ ನಡೆಸಿದವನು. ಕೌಟುಂಬಿಕ ಸಮಸ್ಯೆಗೆ ಮನನೊಂದ ರವಿ ಕಂಠಪೂರ್ತಿ ಕುಡಿದು ಬಂದಿದ್ದ. ಈ ವೇಳೆ ಬಟ್ಟೆ ಹರಿದುಹಾಕಿಕೊಂಡು ಪೊಲೀಸರ ಮುಂದೆಯೇ ಪತ್ನಿ ಹಾಗೂ ತಾಯಿಯ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಇದನ್ನೂ ಓದಿ: ಟಿಎಂಸಿ ಸರ್ಕಾರ ಉರುಳಿಸುವವರೆಗೂ ತಲೆ ಕೂದಲು ಬೆಳೆಸುವುದಿಲ್ಲ: ಶಪಥ ಮಾಡಿ ಬಿಜೆಪಿ ಸೇರಿದ ಕೈ ನಾಯಕ
ಸಾರ್ವಜನಿಕರು ರವಿಯನ್ನು ಸಮಾಧಾನಪಡಿಸಲು ಮುಂದಾದರು ರವಿ ಕ್ಯಾರೆ ಎನ್ನದೇ ಸಿಕ್ಕ ಸಿಕ್ಕವರಿಗೆ ಬೈಯುತ್ತಾ, ಪತ್ನಿ ಹಾಗೂ ತಾಯಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಎಷ್ಟೇ ತಿಳಿ ಹೇಳಿದರೂ ಕೇಳದೇ ಇದ್ದಾಗ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ರವಿಯನ್ನೂ ತಾಲೂಕು ಕಚೇರಿಯಿಂದ ಹೊರಕಳಿಸಲು ಮುಂದಾಗಿದ್ದಾರೆ. ಆದರೆ ಆತ ಹೊರ ಹೋಗದೇ ಮತ್ತಷ್ಟು ಸಿಟ್ಟಾಗಿದ್ದಾನೆ. ತಾನು ಧರಿಸಿದ್ದ ಪ್ಯಾಂಟ್, ಶರ್ಟ್ ಬಿಚ್ಚಿ, ಹೊಡೆಯಲು ಬಂದ ಪೊಲೀಸರಿಗೆ ತೊಡೆ ತಟ್ಟಿ ಅವಾಜ್ ಹಾಕಿದ್ದಾನೆ. ರವಿಯ ರಂಪಾಟಕ್ಕೆ ಬೇಸತ್ತ ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದಾರೆ.