Monday, May 20, 2024

ವಿಧಾನಸೌಧ ಭಯೋತ್ಪಾದಕರ ಬೀಡಾಗಿದೆ : ಆರ್. ಅಶೋಕ್

ಬೆಂಗಳೂರು : ವಿಧಾನಸೌಧ ಭಯೋತ್ಪಾದಕರ ಬೀಡಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಜೊತೆ ಮಾತನಾಡಿದ್ದೇವೆ. ವಿಧಾನಸೌಧ ಸ್ಲೀಪರ್ ಸೆಲ್ ಆಗಿದೆ ಅಂತ‌ತಿಳಿಸಿದ್ದೇವೆ. ಅವರು ಕೂಡ ಆಘಾತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಕರ್ನಾಟಕ ಶಾಂತಿ ನಾಡು. ಹೀಗಾಗಿದೆಯಾ ಅಂತ ರಾಜ್ಯಪಾಲರು ಕಳವಳ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದಿಂದ ವರದಿ ತರಿಸಿಕೊಳ್ಳುವುದಾಗಿ ಹೇಳಿದ್ದಾರೆ. ವರದಿಯನ್ನ ಕೇಂದ್ರಕ್ಕೆ ಕಳಿಸುವುದಾಗಿಯೂ ಹೇಳಿದ್ದಾರೆ ಎಂದು ತಿಳಿಸಿದರು.

ಪ್ರಕರಣದ ಸಂಬಂಧ FSL ರಿಪೋರ್ಟ್‌ ಬಂದಿದೆ ಅಂತಿದ್ದಾರೆ. ಅದನ್ನು ಜನರ ಮುಂದೆ ಇಡಬೇಕು. ಅದರಲ್ಲಿ ಏನಿದೆ ಅಂತ ಹೇಳೋಕೆ ನಾನು ಜ್ಯೋತಿಷಿ ಅಲ್ಲ. ಏನು ವರದಿ ಇದೆ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದರು.

ಮಾಧ್ಯಮದ ಮೇಲೂ ಹಲ್ಲೆ ನಡೆಸಲು ಯತ್ನ

ಪಾಕಿಸ್ಥಾನದ ಪರವಾಗಿ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಯಾರೂ ಕೂಡ ಚಕಾರ ಎತ್ತುತ್ತಿಲ್ಲ. ಕಾಂಗ್ರೆಸ್ ನಾಯಕರು ಈ ಘಟನೆಯನ್ನು ಅವಮಾನ ಎಂದು ಸ್ವೀಕರಿಸದೆ, ಈ ಘಟನೆಯನ್ನು ತಿರುಚಲು ಪ್ರಯತ್ನಿಸುತ್ತಿದ್ದಾರೆ. ಮಾಧ್ಯಮದ ಮೇಲೂ ಹಲ್ಲೆ ನಡೆಸಲು ಯತ್ನಿಸಿದ್ದಾರೆ, ಇದು ಖಂಡನೀಯ ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು

ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ ದೇಶದ್ರೋಹಿಗಳನ್ನು ಬೆಂಬಲಿಸುವ ಮನಸ್ಥಿತಿಯನ್ನು ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು. ಆಗ ಮಾತ್ರ ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದು ಆರ್. ಅಶೋಕ್ ಹೇಳಿದರು.

RELATED ARTICLES

Related Articles

TRENDING ARTICLES