ರಾಮನಗರ : ಮಂಡ್ಯ ಜಿಲ್ಲೆಯಲ್ಲಿ 5.5 ಲಕ್ಷ ಮತಗಳು ಜೆಡಿಎಸ್ ಪಕ್ಷದ ಪರ ಇದೆ ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಬಿಡದಿ ಕೇತಗಾನಹಳ್ಳಿ ತೋಟದ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯ ನಾಯಕರನ್ನು ನೋಡಿ ಬಹಳ ದಿನಗಳಾಗಿತ್ತು. ಹಾಗಾಗಿ, ಇಂದು ಅವರ ಜೊತೆ ಊಟ ಮಾಡಿ ಒಂದು ಸಭೆ ಮಾಡೋಣ ಅಂತ ಕರೆದಿದ್ದೇವೆ ಎಂದು ತಿಳಿಸಿದರು.
ಅಭ್ಯರ್ಥಿ ಆಯ್ಕೆ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಆಗಿಲ್ಲ. ಮಂಡ್ಯ ಟಿಕೆಟ್ ಅನ್ನು ನಮ್ಮ ಪಕ್ಷಕ್ಕೆ ತೆಗೆದುಕೊಳ್ಳಬೇಕು ಎನ್ನುವುದು ಸ್ಥಳೀಯ ಮುಖಂಡರ ಒತ್ತಾಯ. ಆದರೆ, ನಾವು ಎನ್ಡಿಎ ಮೈತ್ರಿ ಕೂಟದಲ್ಲಿದ್ದೇವೆ. ನಾವು ನಮ್ಮ ಅಭಿಪ್ರಾಯವನ್ನು ಬಿಜೆಪಿ ವರಿಷ್ಠರಿಗೆ ತಿಳಿಸಿದ್ದೇವೆ. ಬಿಜೆಪಿ ವರಿಷ್ಠರು ಯಾವ ಸೂಚನೆ ನೀಡಿದರೂ ಅದಕ್ಕೆ ಗೌರವ ಕೊಡ್ತೀವಿ ಎಂದು ಹೇಳಿದರು.
ನಮ್ಮ ಕೈಯಲ್ಲಿ ಏನೂ ಇಲ್ಲ ಎಂದ ನಿಖಿಲ್
ಮಂಡ್ಯ ಸಂಸದೆ ಸುಮಲತಾ ಸಭೆ ನಡೆಸಿರುವ ಬಗ್ಗೆ ಮಾತನಾಡಿದ ಅವರು, ಈ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡುತ್ತಾರೆ. ನಮ್ಮ ಕೈಯಲ್ಲಿ ಏನೂ ಇಲ್ಲ. ಆರೋಗ್ಯಕರವಾದ ಬೆಳವಣಿಗೆಗಳು ಆಗ್ತಿವೆ. ಹಾಗಾಗಿ, ಗೊಂದಲಕ್ಕೆ ಎಡೆ ಮಾಡಿಕೊಡಬಾರದು ಎಂದು ನಿಖಿಲ್ ಕುಮಾರಸ್ವಾಮಿ ಜಾಣ್ಮೆಯ ಉತ್ತರ ನೀಡಿದರು.