ರಾಮನಗರ : ಬಿಜೆಪಿಯ ಆರಗ ಜ್ಞಾನೇಂದ್ರ ನಮ್ಮ ಗ್ಯಾರಂಟಿಗಳನ್ನು 420 ಅಂದವ್ನೆ. ಅವನು ಅರಗದ ಜ್ಞಾನೇಂದ್ರ, ದಡ್ಡ ಜ್ಞಾನೇಂದ್ರ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು.
ರಾಮನಗರ ಜಿಲ್ಲೆಯ ಬಿಡದಿಯ ಅವರಗೆರೆಯಲ್ಲಿ ನಡೆದ ಗೃಹಲಕ್ಷ್ಮಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಗ್ಯಾರಂಟಿಗಳು 420 ಆದ್ರೆ, ನಿಮ್ಮ ಪಕ್ಷದ ಕಾರ್ಯಕರ್ತರಿಗೆ ಗ್ಯಾರಂಟಿ ತೆಗೆದುಕೊಳ್ಳಬೇಡಿ ಅಂತ ಹೇಳಿ ಎಂದು ಆರಗ ಜ್ಞಾನೇಂದ್ರಗೆ ತಿರುಗೇಟು ನೀಡಿದರು.
ಈ ಭೂಮಿಯನ್ನ ಭೂಮಿತಾಯಿ ಅಂತಾರೆ. ಯಾವುದೇ ಊರಿಗೆ ಹೋದರು ಗ್ರಾಮ ದೇವತೆ ಯಾವುದು ಅಂತಾರೆ. ನನಗೆ ಯಾವುದೇ ಆಹ್ವಾನ ಪತ್ರಿಕೆ ಬಂದರೂ ಶ್ರೀಮತಿ, ಶ್ರೀ ಅಂತ ಸೇರಿಸಿ ಕೊಡ್ತಾರೆ. ಅಂದ್ರೆ ನಮ್ಮ ದೇಶದಲ್ಲಿ ಹೆಣ್ಣಿಗೆ ಎಷ್ಟು ಗೌರವ ಕೊಡ್ತಾರೆ ಅಂತ ಗೊತ್ತಾಗುತ್ತದೆ ಎಂದು ಹೇಳಿದರು.
ಮಹಿಳಾ ಸಬಲೀಕರಣಕ್ಕೆ ಪಣ ತೊಟ್ಟಿದ್ದೇವೆ
ಅರಿಶಿನ, ಕುಂಕುಮ ಹೆಣ್ಣು ಮಕ್ಕಳ ಸಂಕೇತ. ಅದಕ್ಕಾಗಿಯೇ ಹೆಣ್ಣುಮಕ್ಕಳ ಗೌರವಾರ್ಥ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಆರ್ಥಿಕವಾಗಿ ಮಹಿಳೆಯರಿಗೆ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ. ಐದು ಬೆರಳು ಸೇರಿ ಕೈ ಮುಷ್ಠಿ ಆಯ್ತು, ಐದು ಗ್ಯಾರಂಟಿ ಸೇರಿ ಕೈ ಗಟ್ಟಿ ಆಯ್ತು. ಬಿಜೆಪಿ ಮುದುಡಿ ಹೋಯ್ತು, ಜೆಡಿಎಸ್ ತೆನೆ ಬಿಸಾಕಿ ಕಮಲ ತಬ್ಬಿಕೊಂಡರು. ಮಹಿಳೆಯರ ಸಬಲೀಕರಣಕ್ಕೆ ನಾವು ಪಣ ತೊಟ್ಟಿದ್ದೇವೆ ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.