ಬೆಂಗಳೂರು : ನರೇಂದ್ರ ಮೋದಿ ಸರ್ಕಾರದಿಂದ ಸಂವಿಧಾನಕ್ಕೆ ಆತಂಕ ಬಂದಿದೆ. ಕೇಂದ್ರ ಬಿಜೆಪಿ ಸರ್ಕಾರದಿಂದ ಸಂವಿಧಾನಕ್ಕೆ ಧಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪ ಮಾಡಿದರು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ‘ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ’ದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಅನೇಕ ದೇಶಗಳ ಸಂವಿಧಾನವನ್ನು ಅಭ್ಯಾಸ ಮಾಡಿ ನಮ್ಮ ರಾಷ್ಟಕ್ಕೆ ಎಂತಹ ಸಂವಿಧಾನ ಬೇಕು ಅನ್ನೋದನ್ನ ಕೊಟ್ಟಿದ್ದಾರೆ. ಸಂವಿಧಾನ ರಚನೆಯ ದಿನದಿಂದಲೂ ವಿರೋಧ ಮಾಡ್ತಾ ಇದ್ದಾರೆ. ಸಂವಿಧಾನ ಗೊಂದಲ ಗೂಡು ಅಂತ ಮಾತನಾಡುತ್ತಿದ್ದಾರೆ. ಬಿಜೆಪಿ ಸಂವಿಧಾನಕ್ಕೆ ಗೌರವ ನೀಡುತ್ತಿಲ್ಲ ಎಂದು ದೂರಿದರು.
ದಲಿತರಿಗೆ ವಿರುದ್ಧವಾದ ಪಕ್ಷ ಅಂದರೆ ಬಿಜೆಪಿ
ಬಡವರು, ದಲಿತರಿಗೆ ವಿರುದ್ಧವಾದ ಪಕ್ಷ ಅಂದರೆ ಬಿಜೆಪಿ. ಸಂಸದ ಅನಂತ್ ಕುಮಾರ್ ಹೆಗಡೆ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಎಂದು ಹೇಳಿದ್ದರು. ಬಿಜೆಪಿ, ಆರ್ಎಸ್ಎಸ್ ಇದನ್ನು ಖಂಡಿಸುವ ಕೆಲಸ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರು ಅನಂತ್ ಕುಮಾರ್ ಹೆಗೆಡೆ ಮೇಲೆ ಕ್ರಮ ಕೈಗೊಂಡಿಲ್ಲ. ಸಂವಿಧಾನ ಬದಲಾದರೆ ಯಾರು ಉಳಿಯೋಕೆ ಸಾಧ್ಯವಿಲ್ಲ ಎಂದು ಹೇಳಿದರು.
ಆರ್ಥಿಕ ಶಕ್ತಿ ತುಂಬಲು ಗ್ಯಾರಂಟಿ ನೀಡಿದ್ದೇವೆ
ಸಮಾಜದಲ್ಲಿ ಅಸಮಾನತೆ ಇದೆ. ಅಸಮಾನತೆ ಓಡಿಸೋದು ಸರ್ಕಾರದ ಕರ್ತವ್ಯ. ಸಮ ಸಮಾಜವನ್ನು ಕಟ್ಟಿಕೊಳ್ಳುವ ಪ್ರಯತ್ನ ಮಾಡುಬೇಕು. ಜಾತಿ ವ್ಯವಸ್ಥೆ ಕಾರಣದಿಂದ ಅಸಮಾನತೆ ಕಾಣುತ್ತಿದೆ. ವಿದ್ಯೆ ಕಲಿಯೋಕೆ ಸಾಧ್ಯವಾಗದೆ ಅಸಮಾನತೆ ಕಾಣುತ್ತಿದೆ. ಕಾಂಗ್ರೆಸ್ ಪಕ್ಷ ಅವಕಾಶ ವಂಚಿತರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಐದು ಗ್ಯಾರಂಟಿ ನೀಡಿದ್ದೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.