ಹುಬ್ಬಳ್ಳಿ : ಚರ್ಚ್ ಮತ್ತು ಮಸೀದಿಗಳಿಂದ ಒಂದು ನಯಾ ಪೈಸೆ ತೆಗೆದು ನೋಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಚಾಲೆಂಜ್ ಮಾಡಿದರು.
ದೇವಸ್ಥಾನದ ಆದಾಯದ ಮೇಲೆ ತೆರಿಗೆ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವಸ್ಥಾನದ ದುಡ್ಡು ಹೊಡೆಯಲು ನೋಡುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿ ತೀವ್ರ ಹೋರಾಟ ಮಾಡುತ್ತದೆ ಎಂದು ಹೇಳಿದರು.
ಚರ್ಚ್ ಮತ್ತು ಮಸೀದಿಯಲ್ಲಿ ಎಷ್ಟು ಹಣ ಸಂಗ್ರಹ ಆಗುತ್ತೆ? ಕಾಂಗ್ರೆಸ್ನವರು ಲೆಕ್ಕ ಕೊಡಲಿ. ಆ ಹಣದಲ್ಲಿ ಪ್ರತಿಶತ 10 ತೆರಿಗೆ ರೂಪದ ಪಡೆಯಲಿ ನೋಡೋಣ. ಕಾಂಗ್ರೆಸ್ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ. ಅದನ್ನು ಸರಿದೂಗಿಸಲು ಬೇರೆ ಬೇರೆ ರೂಪದಲ್ಲಿ ತೆರಿಗೆ ಹಾಕಿದ್ದಾರೆ. ಆ ಮೂಲಕ ಹಿಂದೂ ವಿರೋಧಿ ನೀತಿಯನ್ನು ತೋರ್ಪಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಹೆಚ್.ಕೆ. ಪಾಟೀಲ್ ಸಿಎಂ ಒತ್ತಡಕ್ಕೆ ಮಣಿದಿದ್ದಾರೆ
ವಿಧಾನಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಎರಡು ನಿರ್ಣಯಗಳ ಅಂಗೀಕಾರ ವಿಚಾರವಾಗಿ ಮಾತನಾಡಿದ ಅವರು, ಇದು ಅತ್ಯಂತ ದುರ್ದೈವದ ಸಂಗತಿ. ಸಚಿವ ಹೆಚ್.ಕೆ. ಪಾಟೀಲ್ ಅಂತಹ ಹಿರಿಯ ರಾಜಕಾರಣಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಒತ್ತಡಕ್ಕೆ ಮಣಿದಿದ್ದಾರೆ. ಇದೊಂದು ಘೋರ ದುರಂತ, ಪ್ರತಿಯೊಂದು ಪ್ಲಾನಿಂಗ್ ಎಂದು ವಾಗ್ದಾಳಿ ನಡೆಸಿದರು.