ಮಂಡ್ಯ : ನಿಖಿಲ್ ಕುಮಾರಸ್ವಾಮಿ ಅವರೇ ಮಂಡ್ಯ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಆಗಬೇಕು. ನಿಖಿಲ್ ಬಾರದೇ ಇದ್ದರೆ ನಾನೂ ಒಬ್ಬ ಆಕಾಂಕ್ಷಿ ಎಂದು ಜೆಡಿಎಸ್ ಮಾಜಿ ಶಾಸಕ ಸುರೇಶ್ ಗೌಡ ಹೇಳಿದರು.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಚಲುವರಾಯಸ್ವಾಮಿ ನನ್ನ ವಿರುದ್ಧ ಸ್ಪರ್ಧಿಸಲಿ. ನಾನು ಅಭ್ಯರ್ಥಿಯಾಗಿ ನನ್ನ ವಿರುದ್ಧ ಸಚಿವ ಚಲುವರಾಯಸ್ವಾಮಿ ನಿಂತರೆ ಒಳ್ಳೆಯದು. ನಾನು ಅವರ ವಿರುದ್ಧ ಸೋತರೆ ರಾಜಕೀಯ ಜೀವನ ಅಂತ್ಯ ಮಾಡಿಕೊಳ್ಳುತ್ತೇನೆ ಎಂದು ಸವಾಲ್ ಹಾಕಿದರು.
ನಿಖಿಲ್ ಚುನಾವಣೆಗೆ ನಿಲ್ಲಬೇಕು ಎಂಬುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರು ಅವರ ನಿರ್ಧಾರವನ್ನು ರೀ ಕನ್ಸಿಡರ್ ಮಾಡಬೇಕು. ಪಾಪಾ ಬೇಕೋ ಬೇಡವೋ ನಿಖಿಲ್ ಅವರು ಕಡಿಮೆ ಅಂತರಿಂದ ಕಳೆದ ಬಾರಿ ಸೋತಿದ್ದಾರೆ. ರಾಮನಗರದಲ್ಲೂ ಷಡ್ಯಂತ್ರಗಳಿಂದ ನಿಖಿಲ್ ಸೋತಿದ್ದಾರೆ. ನಮಗೆ ಕೃತಜ್ಞತೆ ಇದೆ, ಅವರೇ ನಿಲ್ಲಬೇಕು ಎಂಬುದು ಎಲ್ಲರ ಒತ್ತಾಯ. ಈ ಬಗ್ಗೆ ವರಿಷ್ಠರ ಗಮನಕ್ಕೂ ತರಲಾಗಿದೆ, ಅವರು ನಿರ್ಧಾರ ಮಾಡಬೇಕಷ್ಟೇ ಎಂದು ತಿಳಿಸಿದರು.
ನಮ್ಮ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿ
ಒಂದು ವೇಳೆ ನಿಖಿಲ್ ಬಾರದೇ ಇದ್ದರೆ ನಾನೂ ಒಬ್ಬ ಆಕಾಂಕ್ಷಿ. ಇದರಲ್ಲಿ ಯಾವುದೇ ಅನುಮಾನ ಬೇಡ. ನಮ್ಮ ಮೊದಲ ಆದ್ಯತೆ ನಿಖಿಲ್ ಕುಮಾರಸ್ವಾಮಿಗೆ ಕೊಡಬೇಕು. ಅವರು ನಿಲ್ಲಲ್ಲ ಎಂದಾಗ ನಾನು ಆಕಾಂಕ್ಷಿ. ಬಿಜೆಪಿ, ಜೆಡಿಎಸ್ ನಡುವೆ ಕ್ಷೇತ್ರ ಹೊಂದಾಣಿಕೆಯಾಗಿ ನಮಗೆ ಬಿಟ್ಟುಕೊಟ್ರೆ ನಾವು ಕ್ಲೈಮ್ ಮಾಡ್ತಿವಿ. ಎಲ್ಲೆಲ್ಲಿ ಜೆಡಿಎಸ್ ಸ್ಟ್ರಾಂಗ್ ಇದ್ದಾರೆ, ಅದರ ಬಗ್ಗೆ ನಮ್ಮ ವರಿಷ್ಠರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸುರೇಶ್ ಗೌಡ ಹೇಳಿದರು.