Friday, May 17, 2024

ವಿಜಯಪುರದಲ್ಲಿ ಯಾರು ಬೇಕಾದ್ರೂ ಗೆಲ್ತಾರೆ, ಇವ್ರು ಎಷ್ಟು ಜನರನ್ನು ಗೆಲ್ಲಿಸಿದ್ರು? : ಮುರುಗೇಶ್ ನಿರಾಣಿ

ನವದೆಹಲಿ : ವಿಜಯಪುರದಲ್ಲಿ ಯಾರು ಬೇಕಾದರೂ ಗೆಲ್ತಾರೆ. ಉಳಿದಂತೆ ಎಷ್ಟು ಜನರನ್ನು ಗೆಲ್ಲಿಸಿದ್ದಾರೆ ಅಂತ ಹೇಳಲಿ. ಇದೇ ರೀತಿ ಮಾತುಗಳು ಮುಂದುವರಿದ್ರೆ, ಸಮಾಜ ತಕ್ಕ ಪಾಠ ಕಲಿಸಲಿದೆ ಎಂದು ಸ್ವಪಕ್ಷದ ಶಾಸಕ ಯತ್ನಾಳ್ ವಿರುದ್ಧ ಮಾಜಿ ಸಚಿವ ಮುರುಗೇಶ್ ನಿರಾಣಿ ಗುಡುಗಿದರು.

ಲಿಂಗಾಯತ ಲೀಡರ್ ಮುಗಿಸುವ ಪ್ರಯತ್ನ ವಿಚಾರ ಕುರಿತು ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದ್ದಾರೆ. ಇವರು (ಯತ್ನಾಳ್) ಭಾಷಣ ಮಾಡಿರುವ ಒಂದು ಕ್ಷೇತ್ರವೂ ಗೆದ್ದಿಲ್ಲ. ದೀಪ ಆರುವಾಗ ಜೋರಾಗಿ ಹರಿಯುತ್ತದೆ, ಅದನ್ನು ನೆನಪಿನಲ್ಲಿಡಲಿ. ಕೇವಲ ಟಿವಿ, ಪೇಪರ್ ಪಬ್ಲಿಸಿಟಿಗಾಗಿ ಮಾತನಾಡುತ್ತಿದ್ದಾರೆ ಅಷ್ಟೇ ಎಂದು ಕುಟುಕಿದರು.

ಹೈ ಕಮಾಂಡ್​ಗೆ ಹೆದರಿಸಿ ಮಗನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡಿಸಿದ್ದಾರೆ ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅದು ನೂರಕ್ಕೆ ನೂರು ಸುಳ್ಳು, ಹಲವು ದಶಕಗಳ ಕಾಲ ಹೋರಾಟ ಮಾಡಿದ್ದಾರೆ. ಶಾಸಕ ಯತ್ನಾಳ್​ರಿಗೆ ಇವತ್ತು ಕಾಲ ತುಂಬಿದೆ, ಇನ್ನೂ ಮುಂದೆ ಇದು ನಡೆಯಲ್ಲ ಎಂದು ಚಾಟಿ ಬೀಸಿದರು.

ಲಕ್ಷ ಜನ ಸೇರಿಸಿ ಸನ್ಮಾನ ಮಾಡ್ತಿವಿ

ಪಂಚಮಸಾಲಿಗೆ ಮೀಸಲಾತಿ ವಿಚಾರ ಕುರಿತು ಮಾತನಾಡಿ, ಹಿಂದೆ ಲಿಂಗಾಯತರ ಸಭೆಯಲ್ಲಿ ಸಹೋದರಿ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ರು. ಕಾಂಗ್ರೆಸ್​ ಸರ್ಕಾರ ಬಂದು ಮೂರು ದಿನದಲ್ಲಿ ಮೀಸಲಾತಿ ಮಾಡ್ತೀವಿ ಅಂತ. ಬಂಗಾರ ಬಳೆ ರೆಡಿ ಇದೆ ಒಂದು ಜೋಡಿ ಅಲ್ಲ, ಒಂದು ಕಿಲೋ ಬಂಗಾರ ಕೊಡ್ತೀವಿ ಅಂದ್ರು. ಸರ್ಕಾರ ಬಂದು ಏಳು ತಿಂಗಳು ಆಗಿದೆ. ಒಂದು ಲಕ್ಷ ಜನ ಸೇರಿಸಿ ಸನ್ಮಾನ ಮಾಡ್ತೀವಿ ಬೇಗ ಮಾಡಿ ಎಂದು ನಿರಾಣಿ ಕುಟುಕಿದರು.

ಬಾರ್ ಕೋಲು ಹೋರಾಟ ಮಾಡಿ

ಇದೇ ವೇಳೆ, ಸಹೋದರ ಯತ್ನಾಳ್​ ಅವರೇ ಬಾರ್ ಕೋಲು ಹೋರಾಟ ಮಾಡಿ. ಈ ಹಿಂದೆ ವಿಧಾನಸೌಧ ಮುತ್ತಿಗೆ ಹಾಕುವ ಬಗ್ಗೆ ಯತ್ನಾಳ ಹೇಳಿದ್ರು. ಈಗ ಯತ್ನಾಳ್ ಬಾರ್ ಕೋಲ್ ಚಳುವಳಿ ಮಾಡಲಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES