ಶಿವಮೊಗ್ಗ : ಭಯೋತ್ಪಾದಕರಲ್ಲಿ ಹೆಚ್ಚು ಮುಸ್ಲಿಂಮರೇ ಇದ್ದಾರೆ. ಮುಸ್ಲಿಂ ವೋಟ್ ಹೋಗುತ್ತೆ ಅಂತ ಕಾಂಗ್ರೆಸ್ಸಿಗರು ಮುಸ್ಲಿಂರನ್ನು ಓಲೈಸುತ್ತಾರೆ. ದೇಶದ್ರೋಹಿ ಜಮೀರ್ ಅಹ್ಮದ್ ಸಚಿವ ಸಂಪುಟದಲ್ಲಿ ಇದ್ದಾನೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಿಡಿಕಾರಿದರು.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ಮುಸ್ಲಿಂ ಧರ್ಮವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿ ತೆಲಂಗಾಣದಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕುಟುಕಿದರು.
ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯವಾಗಿದೆ. 68 ಶಾಲೆಗಳಿಗೆ ಬಾಂಬ್ ಕರೆ ಬಂದಿತ್ತು. ಆಗ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿ, ಗೃಹ ಸಚಿವ ಡಾ.ಜಿ. ಪರಮೇಶ್ವರ್ಗೆ ಇದರ ಬಗ್ಗೆ ಗಂಭೀರತೆ ಇಲ್ಲ. ಎನ್ಐಎಗೆ ಕೊಟ್ಟು ದೇಶದ್ರೋಹಿಗಳನ್ನು ಬಗ್ಗು ಬಡಿಯಿರಿ ಅಂತ ಕೇಂದ್ರಕ್ಕೆ ಹೇಳಬೇಕಿತ್ತು. ಹಾಗೆ ಆದೇಶ ಮಾಡಿದ್ದರೆ ದೇಶದ್ರೋಹಿಗಳಿಗೆ ಧೈರ್ಯ ಬರುತಿರಲಿಲ್ಲ. ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಭಯೋತ್ಪಾದಕರಿಗೆ ಗುಂಡಿನ ಮೂಲಕನೇ ಉತ್ತರ ಕೊಟ್ಟಿದ್ದಾರೆ ಎಂದು ಗುಡುಗಿದರು.
ಶಾಸಕರ ಮಕ್ಕಳೇ ಈ ಘಟನೆಯಲ್ಲಿ ಭಾಗಿ
ರಾಜ್ಯದಲ್ಲಿ ಗಾಂಜಾ, ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಇದರಲ್ಲಿ ಯಾರಿಗೆ ಎಷ್ಟು ಕಮಿಷನ್ ಹೊಗುತ್ತಿದೆ ಎಂಬುದು ಗೊತ್ತಿಲ್ಲ. ಅಮಲಿನಲ್ಲಿ ಯುವಕರನ್ನು ತೇಲುವ ರೀತಿಯಲ್ಲಿ ಕಾಂಗ್ರೆಸ್ ಸರ್ಕಾರ ಮಾಡಿದೆ. ಭದ್ರಾವತಿಯಲ್ಲಿ ಸಹ ರೀತಿಯ ಘಟನೆ ನಡೆದಿದೆ. ಬಿಜೆಪಿ ಕಾರ್ಯಕರ್ತ ಗೋಕುಲ್ಗೆ ಹೊಡೆದವರನ್ನು ಇಲ್ಲಿಯವರೆಗೆ ಅರೆಸ್ಟ್ ಮಾಡಿಲ್ಲ. ಶಾಸಕರ ಮಕ್ಕಳೇ ಈ ಘಟನೆಯಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿ ಇದೆ ಎಂದು ಗಂಭೀರ ಆರೋಪ ಮಾಡಿದರು.
ಸಿದ್ದರಾಮಯ್ಯ ಎಷ್ಟು ದಿನ ಇರ್ತಾರೋ ಗೊತ್ತಿಲ್ಲ
ರಾಜ್ಯದಲ್ಲಿ ಕಳ್ಳತನಗಳು ಹೆಚ್ಚಾಗಿದೆ. ಪೊಲೀಸ್ ಇಲಾಖೆ ಬದುಕಿದೆಯೋ? ಸತ್ತೋಗಿದೆಯೋ? ಗೊತ್ತಿಲ್ಲ. ಮುಖ್ಯಮಂತ್ರಿ, ಗೃಹ ಮಂತ್ರಿಗಳು ಅಧಿಕಾರದ ದಾಹಕ್ಕೆ ಮೌನವಾಗಿ ಇದ್ದು ಸ್ವಾರ್ಥಿಗಳಾಗಬಾರದು. ನೀವು ಜನರಿಗೆ ರಕ್ಷಣೆ ನೀಡುತ್ತಿಲ್ಲ. ಗೂಂಡಾಗಳಿಗೆ ರಕ್ಷಣೆ ಕೋಡುತ್ತಿದ್ದೀರಾ. ರೈತರ ನೆರವಿಗೆ ಬಾರದೆ ಮುಸ್ಲಿಂಮರಿಗೆ ಅನುದಾನ ಕೊಡುತ್ತೇವೆ ಅಂತಿರಾ. ರಾಜ್ಯದ ಜನ ಇವೆಲ್ಲವನ್ನು ಗಮನಿಸುತ್ತಿದ್ದಾರೆ. ಮುಖ್ಯಮಂತ್ರಿಗಳು ಎಷ್ಟು ದಿನ ಆಡಳಿತದಲ್ಲಿ ಇರ್ತಿರೋ ಗೊತ್ತಿಲ್ಲ. ಇರುವಷ್ಟು ದಿನ ಒಳ್ಳೆಯ ಕೆಲಸ ಮಾಡಿ ಎಂದು ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದರು.