ಜೈಪುರ: ರಾಜಸ್ಥಾನದ ನೂತನ ಮುಖ್ಯಮಂತ್ರಿಯಾಗಿ ಭಜನ್ ಲಾಲ್ ಶರ್ಮಾ ಆಯ್ಕೆಯಾಗಿದ್ದಾರೆ.
ಹೌದು ಹೊಸಬರಿಗೆ ಈ ಬಾರೀ ಸಿಎಂ ಸ್ಥಾನವನ್ನು ಬಿಜೆಪಿ ಹೈಕಮಾಂಡ್ ನೀಡಿದೆ. ಸಿಎಂ ರೇಸ್ನಲ್ಲಿಇಲ್ಲದವರಿಗೆ ಸಿಎಂಪಟ್ಟ ಒಲಿದು ಬಂದಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಾಗಿದೆ.
ಇವರು ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದವರಾಗಿದ್ದು, ಈ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಂದು ಅಚ್ಚರಿಯ ಆಯ್ಕೆ ಮಾಡಿದೆ. ಮುಂದಿನ ಲೋಕಸಭೆ ಚುನಾವಣೆಗಾಗಿ ಹೊಸ ಮುಖಗಳನ್ನು ಬಿಜೆಪಿ ಹೈಕಮಾಂಡ್ ಆಯ್ಕೆ ಮಾಡಲಿದೆ. ಈ ಮೂಲಕ ಛತ್ತೀಸ್ಗಢ, ಮಧ್ಯಪ್ರದೇಶ ಇದೀಗ ರಾಜಸ್ಥಾನದಲ್ಲಿಯೂ ಹೊಸ ಮುಖಕ್ಕೆ ಬಿಜೆಪಿ ಹೈಕಮಂಡ್ ಮಣೆ ಹಾಕಿದೆ.
ಜೈಪುರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪಕ್ಷದ ಮೂವರು ಕೇಂದ್ರ ವೀಕ್ಷಕರ ಸಮ್ಮುಖದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಈ ಘೋಷಣೆ ಹೊರಬಿದ್ದಿದೆ.
ಜೈಪುರದ ಸಂಗನೇರ್ ವಿಧಾನಸಭೆಯಿಂದ ಮೊದಲ ಬಾರಿಗೆ ಶಾಸಕರಾಗಿದ್ದಾರೆ. ಅವರು ಕಾಂಗ್ರೆಸ್ನ ಪುಷ್ಪೇಂದ್ರ ಭಾರದ್ವಾಜ್ ಅವರನ್ನು 48,081 ಮತಗಳಿಂದ ಸೋಲಿಸಿದ್ದರು.
ಇಬ್ಬರು ಡಿಸಿಎಂ ಆಯ್ಕೆ
ಭಜನ್ಲಾಲ್ ಶರ್ಮ ಜೊತೆ ಇಬ್ಬರು ರಾಜಸ್ಥಾನದ ಉಪಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ರೇಸ್ನಲ್ಲಿ ರಾಜ ಕುಟುಂಬದ ದಿಯಾ ಕುಮಾರಿ ಹಾಗೂ ಪ್ರೇಮ್ಚಂದ್ ಬೈರವಾ ಅವರನ್ನು ಉಪಮುಖ್ಯಮಂತ್ರಿಗಳಾಗಿ ನೇಮಕ ಮಾಡಲಾಗಿದೆ. ಇನ್ನೂ, ಸ್ಪೀಕರ್ ಆಗಿ ವಾಸುದೇವ್ ದೇವನಾನಿ ಆಯ್ಕೆಯಾಗಿದ್ದಾರೆ.