Sunday, May 19, 2024

ತುಳು ಭಾಷೆಗೆ ಹೆಚ್ಚುವರಿ ರಾಜ್ಯಭಾಷೆ ಮಾನ್ಯತೆ : ಸಿಎಂ ಸಿದ್ದರಾಮಯ್ಯ ಭರವಸೆ

ಬೆಂಗಳೂರು : ತುಳು ಭಾಷೆಯನ್ನು ಹೆಚ್ಚುವರಿ ರಾಜ್ಯಭಾಷೆಯನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಕರಾವಳಿಯ ಜಾನಪದ ಕ್ರೀಡೆ ‘ಕಂಬಳ ಉತ್ಸವ’ ಹಾಗೂ ತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದ್ದಾರೆ.

ಕನ್ನಡ ಕರ್ನಾಟಕಕ್ಕೆ ಅಧಿಕೃತ ಭಾಷೆಯಾಗಿದೆ. ರಾಜ್ಯದ ಇನ್ನೊಂದು ಪ್ರಮುಖ ಭಾಷೆಯಾದ ತುಳುವಿಗೂ ವಿಶೇಷ ಸ್ಥಾನಮಾನ ನೀಡಲು ಶ್ರಮಿಸಲಾಗುವುದು. ಅಲ್ಲದೆ, ತುಳುವರಿಗೆ ಭಾಷಾಭಿಮಾನ ಜಾಸ್ತಿ ಇದೆ. ಹಿಂದಿ, ಇಂಗ್ಲಿಷ್ ಗೊತ್ತಿರುವ ಇಬ್ಬರು ತುಳು ಭಾಷಿಗರು ಸಿಕ್ಕರೆ, ಅವರು ತುಳುವಿನಲ್ಲೇ ಮಾತು ಶುರು ಮಾಡುತ್ತಾರೆ ಎಂದು ಹೇಳಿದ್ದಾರೆ.

ಕಂಬಳ ಕರಾವಳಿ ಜಿಲ್ಲೆಗಳ ಜಾನಪದ ಕಲೆ. ರೈತರು ಭತ್ತ ಬೆಳಿತಾ ಇದ್ದರು, ಆಗ ವ್ಯವಸಾಯ ಇಲ್ಲದ ಸಮಯ ಅಂದರೆ, ನವೆಂಬರ್ ಹಾಗೂ ಡಿಸೆಂಬರ್​ ಹೀಗೆ ಕೆಲ ತಿಂಗಳಲ್ಲಿ ಜಾನುವಾರಗಳ ಉತ್ಸವವನ್ನು ಮಾಡಿ, ಅವುಗಳನ್ನು ಕ್ರೀಡೆಯಲ್ಲಿ ತೊಡಗಿಸಿ ಮನರಂಜನೆ ಪಡೆಯುತ್ತಿದ್ದರು. ಹೀಗೆ ಈ ಕ್ರೀಡೆ ಬೆಳೆದುಬಂತು ಎಂದು ತಿಳಿಸಿದ್ದಾರೆ.

ಪ್ರತಿವರ್ಷ ಕಂಬಳ ಮುಂದುವರಿಸಿ

ಇನ್ನು ಇದನ್ನು ಬೆಂಗಳೂರು ನಗರಕ್ಕೆ ಪರಿಚಯಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಕರಾವಳಿಯ ಲಕ್ಷಾಂತರ ಜನರು ಬೆಂಗಳೂರು ನಗರದಲ್ಲಿ ನೆಲೆಸಿದ್ದಾರೆ. ಈ ಹಿಂದೆ ಎರಡು ಬಾರಿ ಕರಾವಳಿಯಲ್ಲಿ ಕಂಬಳ ಉದ್ಘಾಟನೆ ಮಾಡಿದ್ದೆ. ಬೆಂಗಳೂರಿನಲ್ಲಿ ಪ್ರತಿವರ್ಷ ಕಂಬಳ ಮುಂದುವರಿಸುವ ಕೆಲಸ ಮಾಡಿ, ಬೆಂಗಳೂರಿನ ನಿವಾಸಿಗಳಿಗೂ ಇದು ಮನೋರಂಜನೆಯ ಕ್ರೀಡೆ ಆಗುತ್ತದೆ. ಕಂಬಳ ಸಮುದಾಯ ಭವನ ನಿರ್ಮಿಸಲು ಪ್ರಯತ್ನಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

RELATED ARTICLES

Related Articles

TRENDING ARTICLES