ಚಿತ್ರದುರ್ಗ : ಡಿ.ಕೆ ಶಿವಕುಮಾರ್ ಅವರು ಮತ್ತೆ ಜೈಲಿಗೆ ಹೋಗುವುದು ಖಚಿತ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಹೇಳಿಕೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿರುಗೇಟು ನೀಡಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಬಿಜೆಪಿ ಜೊತೆ ಕೈ ಜೋಡಿಸಿದ್ದು ಡಿ.ಕೆ ಶಿವಕುಮಾರ್ ಜೈಲಿಗೆ ಕಳಿಸಲು ಇರಬೇಕು ಎಂದು ಕುಟುಕಿದರು.
ಹೆಚ್ಡಿಕೆ ಒಳಗಿನ ಸಂಚನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ರಾಜಕೀಯ ಹೇಳಿಕೆಗಳ ಬಗ್ಗೆ ನಾನು ಹೆಚ್ಚು ಗಮನ ನೀಡಲ್ಲ. ನಾವು ಎಲ್ಲವನ್ನು ಎದುರಿಸಲು ಸಜ್ಜಾಗಿದ್ದೇವೆ. ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಜನಪರ ಆಡಳಿತ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿ ಹಾಗೂ ಜೆಡಿಎಸ್ ಕಣ್ಣು ಕುಕ್ಕುತ್ತಿದೆ
ಪ್ರಪಂಚದಲ್ಲಿ ಯಾವುದೇ ಪಕ್ಷ ಮಾಡದ ಕ್ರಾಂತಿಕಾರಿ ಗ್ಯಾರಂಟಿ ಕಾರ್ಡ್ ನೀಡಿದ್ದೇವೆ. ಬಡವರಿಗೆ ಸಹಾಯ ಮಾಡಿದ್ದು ಬಿಜೆಪಿ ಹಾಗೂ ಜೆಡಿಎಸ್ ಕಣ್ಣು ಕುಕ್ಕುತ್ತಿದೆ. ಅವರು ಇದ್ದಾಗ ಬರೀ ಲಂಚ ಹೊಡೆದು ಕಾಲ ಕಳೆದರು. ಬಡವರ, ರೈತರ ಪರ ಸರ್ಕಾರ ಇರುವುದು ಸಹಿಸಲು ಆಗುತ್ತಿಲ್ಲ. ಹೀಗಾಗಿ, ನಮ್ಮ ಲೀಡರ್ಗಳನ್ನು ಜೈಲಿಗೆ ಹಾಕುತ್ತೇವೆ ಎಂದು ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ರಾಜ್ಯದ ಜನ ಎರಡೂ ಪಕ್ಷಗಳಿಗೂ ಪಾಠ ಕಲಿಸಿದ್ದಾರೆ, ಮುಂದೆಯೂ ಕಲಿಸುತ್ತಾರೆ ಎಂದು ತಿಳಿಸಿದರು.