Friday, May 17, 2024

ಧರ್ಮರಾಯನ ಧರ್ಮತ್ವ, ಕರ್ಣನ ದಾನತ್ವ, ಕೃಷ್ಣನ ತಂತ್ರ ಇರಬೇಕು : ಡಿ.ಕೆ. ಶಿವಕುಮಾರ್

ಬೆಂಗಳೂರು : ಧರ್ಮರಾಯನ ಧರ್ಮತ್ವ ಇರಬೇಕು, ಅರ್ಜುನನ ಗುರಿ ಇರಬೇಕು, ಕರ್ಣನ ದಾನತ್ವ ಇರಬೇಕು, ವಿದುರನ ನೀತಿ ಇರಬೇಕು, ಭೀಮನ ಬಲ ಇರಬೇಕು, ಕೃಷ್ಣನ ತಂತ್ರ ಇರಬೇಕು. ಆಗ ರಾಜಕೀಯದಲ್ಲಿ ಸಕ್ಸಸ್ ಆಗಬಹುದು ಎಂದು ಮಾಜಿ ಸಚಿವ ಡಾ.ಕೆ ಸುಧಾಕರ್​ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟರು.

ಬೆಂಗಳೂರಿನ ಚಿತ್ರಕಲಾ ಪರಿಷತ್​ನಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ಜೀವನಗಾಥೆಯ ‘ನೆಲದ ಸಿರಿ’ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನಮಗೂ ಎಸ್.ಎಂ ಕೃಷ್ಣಗೂ ಬೇಕಾದಷ್ಟು ರಾಜಕೀಯ ಭಿನ್ನಾಭಿಪ್ರಾಯ ಇದೆ. ಚಾಡಿ ಹೇಳೋರು ಇದ್ದಾರೆ. ಹೈಕಮಾಂಡ್ ಹೇಳಿದೆ ಅಂತ ನನ್ನನ್ನೇ ಸಚಿವ ಸಂಪುಟದಿಂದ ಬಿಟ್ಟುಬಿಟ್ಟಿದ್ರು ಎಂದು ಹೇಳಿದರು.

ಕೃಷ್ಣ ಅವರಿಗೂ ನನಗೂ 35 ವರ್ಷಗಳ ರಾಜಕೀಯ ಸಂಬಂಧ, ಸಂಬಂಧಿಗಳೂ ಹೌದು. ಬರ, ಕಾವೇರಿ, ರಾಜ್ ಕುಮಾರ್ ವಿಚಾರ, ಆರ್ಥಿಕ ಸಂಕಷ್ಟ ಇದೆಲ್ಲಾ ನೋಡಿದ್ದಾರೆ. ನಾನು ಅವರ ಸಂಪುಟದಲ್ಲಿ ಮಂತ್ರಿ ಆಗಿದ್ದೆ. ಇತಿಹಾಸವನ್ನ ಮರೆತವರು ಇತಿಹಾಸ ಸೃಷ್ಠಿಸಲು ಸಾಧ್ಯವಿಲ್ಲ. ಅಧಿಕಾರ, ಹಣ ಎರಡೂ ಗೂಡ್ಸ್ ಆಫ್ ಲೈಫ್. ನಾವೆಲ್ಲಾ ಕುಟುಂಬದವರು, ರಾಜಕಾರಣ ಏನ್ ಮಾತಾಡ್ಲಿ ಅಂತ ಗೊತ್ತಾಗ್ತಿಲ್ಲ ಎಂದರು.

HDD ಮಕ್ಕಳಿಗೂ ಒಳ್ಳೇದೆ ಮಾಡಿದ್ದಾರೆ

ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ್ರು ಅವರ ಮಕ್ಕಳಿಗೂ ಎಸ್.ಎಂ ಕೃಷ್ಣ ಒಳ್ಳೆಯದು ಮಾಡಿದ್ದಾರೆ. ಮರಕ್ಕೆ ಬೇರು ಎಷ್ಟು ಮುಖ್ಯವೋ ನಂಬಿಕೆಯೂ ಅಷ್ಟೇ ಮುಖ್ಯ. ನಂಬಿಕೆ ಇಲ್ಲ ಎಂದರೆ ಸಂಬಂಧ ಉಳಿಯಲ್ಲ. ನನ್ನಂಥ ಹತ್ತಾರು ಜನರನ್ನ ಎಸ್.ಎಂ. ಕೃಷ್ಣ ಅವರು ತಯಾರು ಮಾಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು.

ಮೂರು ‘ಕೆ’ಗಳನ್ನು ಸ್ಮರಿಸಿಕೊಳ್ಳಬೇಕು

ಈ ರಾಜ್ಯ ಜನ ಮೂರು ‘ಕೆ’ಗಳನ್ನ ಸ್ಮರಿಸಿಕೊಳ್ಳಬೇಕು. ನಾಡಪ್ರಭು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಎಸ್.ಎಂ ಕೃಷ್ಣ ಅವರನ್ನು ಮರೆಯುವಂತಿಲ್ಲ. ಎಸ್.ಎಂ ಕೃಷ್ಣ ಕೂಡ ಕೆಪಿಸಿಸಿ ಅಧ್ಯಕ್ಷರಾಗಿದ್ದವರು. ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾತ್ರ ಎಲ್ಲಾ ವರ್ಗದವರಿಗೂ ಆದ್ಯತೆ. ಹೆಸರು ಬದಲಾವಣೆ ಮಾಡಿಕೊಳ್ಳಬಹುದಷ್ಟೇ ಎಂದು ಹೇಳಿದರು.

RELATED ARTICLES

Related Articles

TRENDING ARTICLES