Thursday, May 2, 2024

ದಸರಾ ಮೇಲೆ ಬರದ ಛಾಯೆ! : ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ ಸರ್ಕಾರ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾಗೆ ಬರಸಿಡಿಲು ಬಡಿದಿದೆ. ಅದ್ಧೂರಿ ದಸರಾ ಆಚರಣೆ ಸಿದ್ಧತೆಯಲ್ಲಿದ್ದ ಸರ್ಕಾರ ಇದೀಗ ಸರಳ ದಸರಾ ಆಚರಣೆ ಮಾಡಬೇಕಾ? ಅದ್ಧೂರಿ ದಸರಾ ಆಚರಣೆ ಮಾಡಬೇಕಾ ಅನ್ನೋ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದೆ.

‘ಮೈಸೂರು ದಸರಾ ಎಷ್ಟೊಂದು ಸುಂದರಾ..’ ವಿಶ್ವವಿಖ್ಯಾತ ಮೈಸೂರು ದಸರಾ ಬಂದಾಗಲೆಲ್ಲ ಈ ಹಾಡು ಎಲ್ಲೆಲ್ಲೂ ಮಾರ್ಧನಿಸುತ್ತಿತ್ತು. ಆದ್ರೀಗ ವರುಣಾಘಾತ ನೀಡಿದ್ದಕ್ಕೆ ಅದ್ಧೂರಿ ದಸರಾಗೆ ಈ ಬಾರಿ ಬರದ ಸಿಡಿಲು ಬಡಿದಂತಾಗಿದೆ. ಅದ್ಧೂರಿ ದಸರಾ ಆಚರಣೆ ಘೋಷಣೆ ಮಾಡಿ ದಸರಾ ಸಿದ್ಧತೆಯಲ್ಲಿದ್ದ ಸರ್ಕಾರ ತನ್ನ ನಿರ್ಧಾರ ಬದಲಿಸುವ ಚಿಂತನೆಯಲ್ಲಿದೆ.

ಮುಂಗಾರು ಕೈ ಕೊಟ್ಟ ಪರಿಣಾಮ ರಾಜ್ಯದ ಜಲಾಶಯಗಳು ಬರಿದಾಗುವ ಹಂತಕ್ಕೆ‌ ತಲುಪಿವೆ. ಮತ್ತೊಂದು ಕಡೆ ಪದೇ ಪದೆ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಹಿನ್ನಡೆಯಾಗುತ್ತಿದೆ. ಕೆರಳಿದ ರೈತರು ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಟದಲ್ಲಿದ್ದಾರೆ. ಹೀಗಾಗಿ, ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಹಾಗಾಗಿ ಸರಳವಾಗಿ ದಸರಾ ಆಚರಿಸಬೇಕಾ? ಅದ್ಧೂರಿಯಾಗಿ ಆಚರಿಸಬೇಕಾ ಎಂಬ ಗೊಂದಲದಲ್ಲಿದೆ.

ಹೊಟ್ಟೆಗೆ ಇಟ್ಟಿಲ್ಲ, ಜುಟ್ಟಿಗೆ ಯಾಕೆ ಮಲ್ಲಿಗೆ?

ಇನ್ನೂ ದಸರಾ ಮಹೋತ್ಸವಕ್ಕೆ ದಿ‌ನಗಣನೆ ಆರಂಭವಾಗಿದ್ದು, ಆನೆ ತಾಲೀಮು ಹೊರತುಪಟಿಸಿದ್ರೆ ಮತ್ತಾವುದೇ ಚಟುವಟಿಕೆಗಳು ಆರಂಭವಾಗಿಲ್ಲ. ದಸರಾ ಆಚರಣೆ ಹೇಗೆ ಮಾಡಬೇಕು ಅನ್ನೋದಕ್ಕೂ ಅಧಿಕಾರಿಗಳಿಗೆ ಸರ್ಕಾರದಿಂದ ಯಾವುದೇ ಮಾರ್ಗದರ್ಶನ ಕೂಡ ಬಂದಿಲ್ಲ. ಈ ನಡುವೆ ರೈತರು ಸರಳ ಸಾಂಪ್ರದಾಯಿಕ ದಸರಾ ಆಚರಣೆ ಮಾಡಲಿ ಅಂತಿದ್ದಾರೆ. ಹೊಟ್ಟೆಗೆ ಇಟ್ಟಿಲ್ಲ ಅಂದ ಮೇಲೆ ಜುಟ್ಟಿಗೆ ಯಾಕೆ ಮಲ್ಲಿಗೆ ಅನ್ನೋದು ರೈತರ ಪ್ರಶ್ನೆ ಕೂಡ.

ಒಟ್ಟಿನಲ್ಲಿ, ಎರಡು ವರ್ಷ ಕೊರೋನಾ, ಇದೀಗ ಬರ ಈ ನಡುವೆ ಈ ಬಾರಿ ದಸರಾ ಆಚರಣೆ ಹೇಗೆ ಅನ್ನೋದು ಸರ್ಕಾರಕ್ಕೆ ಯಕ್ಷ ಪ್ರಶ್ನೆಯಾಗಿದೆ.

RELATED ARTICLES

Related Articles

TRENDING ARTICLES