ಬೆಂಗಳೂರು : ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಪಾರ್ಥಿವ ಶರೀರ ಬೆಂಗಳೂರಿಗೆ ಆಗಮಿಸಿದೆ.
ಥೈಲ್ಯಾಂಡಿನ ಸುವರ್ಣ ಭೂಮಿ ವಿಮಾನ ನಿಲ್ದಾಣದಿಂದ ಥಾಯ್ ಏರ್ ಲೈನ್ಸ್ಗೆ ಸೇರಿದ ವಿಶೇಷ ವಿಮಾನದಲ್ಲಿ ರಾತ್ರಿ 10.59ಕ್ಕೆ ಬೆಂಗಳೂನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ. ಇದೇ ವಿಮಾನದಲ್ಲಿ ನಟ ವಿಜಯ್ ರಾಘವೇಂದ್ರ ಹಾಗೂ ಸಂಬಂಧಿಕರು ಆಗಮಿಸಿದ್ದಾರೆ.
ವಿಮಾನ ನಿಲ್ದಾಣದ ಡಬ್ಲ್ಯೂಎಸ್(WFS) ಏರ್ ಕಾರ್ಗೋ ಟರ್ಮಿನಲ್ಗೆ ಬಂದ ಸ್ಪಂದನಾ ಮೃತದೇಹವನ್ನು ನಿಯಮಾನುಸಾರ ಸ್ಕ್ಯಾನ್ ಮಾಡಿ ದಾಖಲೆ ಪರಿಶೀಲನೆ ಮಾಡಲಾಯಿತು. ಕಸ್ಟಮ್ಸ್ ಕ್ಲಿಯರೆನ್ಸ್ ನಂತರ ಕುಟುಂಬಸ್ಥರಿಗೆ ಪಾರ್ಥಿವ ಶರೀರ ಹಸ್ತಾಂತರಿಸಲಾಯಿತು. ಸ್ಪಂದನಾ ತಂದೆ ಬಿ.ಕೆ ಶಿವರಾಂ, ಸಹೋದರ ರಕ್ಷಿತ್ ಶಿವರಾಂ ಹಾಗೂ ಚಿನ್ನೇಗೌಡ್ರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.
ಸ್ಪಂದನಾ ತಂದೆ ಬಿ.ಕೆ.ಶಿವರಾಂ ಅವರ ಮಲ್ಲೇಶ್ವರದ ನಿವಾಸದ ಎದುರು ಈಗಾಗಲೇ ಅಂತಿಮ ದರ್ಶನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಂಬಂಧಿಕರು, ಬಂಧು-ಬಳಗ ಸೇರಿದಂತೆ ಬಹಳಷ್ಟು ಮಂದಿ ಸೇರಿದ್ದಾರೆ.