ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸಿಎಂ ಡಿ.ಕೆ ಶಿವಕುಮಾರ್ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಶಿಕಾರಿಪುರ ಬಿಜೆಪಿ ಶಾಸಕ ಬಿ.ವೈ ವಿಜಯೇಂದ್ರ ಕುಟುಕಿದರು.
ರಾಜ್ಯ ಬಜೆಟ್ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಂಡಿರುವ 14ನೇ ಬಜೆಟ್ ನಿರಾಶಾದಾಯಕವಾಗಿದೆ ಎಂದು ಟೀಕಿಸಿದರು.
ರಾಜ್ಯ ಬಜೆಟ್ ಬಗ್ಗೆ ಬಹಳ ನಿರೀಕ್ಷೆ ಇತ್ತು. ನಿರಾಶೆ ಆಗಿರೋದು ಕರ್ನಾಟಕ ಜನತೆಗೆ ಮಾತ್ರವಲ್ಲ, ಡಿಕೆಶಿ ಅವರಿಗೂ ನಿರಾಶೆ ಆಗಿದೆ. ಡಿಕೆಶಿ ಅವರು ಚುನಾವಣೆ ಮೊದಲು ಪಾದಯಾತ್ರೆ ಮಾಡಿದ್ರು. ಮೇಕೆದಾಟಿಗೆ 3 ಸಾವಿರ, ಮಹದಾಯಿಗೆ 10 ಕೋಟಿ ರೂಪಾಯಿ ಮೀಸಲು ಅಂತ ಹೇಳಿದ್ರು. ಆದರೆ ಬಜೆಟ್ನಲ್ಲಿ ಹಣ ಮೀಸಲಿಟ್ಟಿಲ್ಲ. ಸಿದ್ದರಾಮಯ್ಯ ಅವರು ಡಿಕೆಶಿ ಮೇಲೆ ಸೇಡು ತೀರಿಸಿಕೊಂಡಂತಿದೆ ಎಂದು ಛೇಡಿಸಿದರು.
ಇದನ್ನೂ ಓದಿ : ಇಂದಿನ ಬಜೆಟ್ ರಾಜ್ಯದ ಜನತೆಯ ಮೇಲೆ ಗೂಬೆ ಕೂರಿಸುವ ಕೆಲಸ: ಆರ್.ಅಶೋಕ್
ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್
ಸಿದ್ದರಾಮಯ್ಯ ಅವರ ಶ್ರಮ, ಬುದ್ದಿವಂತಿಕೆ ಎಲ್ಲ ವ್ಯರ್ಥ ಆಗಿದೆ. ಕೇಂದ್ರದ ಮೇಲೆ ಗೂಬೆ ಕೂರಿಸುವುದು, ಹಿಂದಿನ ಬಿಜೆಪಿ ಸರ್ಕಾರವನ್ನು ಬೈಯ್ಯೋದು ಮಾಡಿದ್ದಾರೆ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾಯಕರ್ತೆಯರಿಗೆ ಹಣ ಮೀಸಲಿಟ್ಟಿಲ್ಲ. ಇಡೀ ಬಜೆಟ್ ಪೊಲಿಟಿಕಲ್ ಸ್ಟೇಟ್ಮೆಂಟ್ ಅಂದರೆ ತಪ್ಪಾಗಲ್ಲ ಎಂದು ಚಾಟಿ ಬೀಸಿದರು.
ಡಿಕೆಶಿಗೆ ಪಾಠ ಕಲಿಸಿದ್ದಾರೆ
ನಿಜವಾಗಲು ಇದು ದುರಾದೃಷ್ಟ. ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸಿದ್ದಾರೆ. ಬಿಜೆಪಿ ಆರ್ಥಿಕ ಶಿಸ್ತು ಕಾಪಾಡದಿದ್ರೆ ಇವತ್ತು ಕಷ್ಟ ಆಗುತ್ತಿತ್ತು. ಬಂಡವಾಳ ಹೂಡಿಕೆಯಲ್ಲೂ 9.8 ಲಕ್ಷ ಕೋಟಿ MOU ಆಗಿದೆ. ಭ್ರಷ್ಟಾಚಾರ ಅಂತ ಆರೋಪಿಸಿ ಗೂಬೆ ಕೂರಿಸಿದ್ದಾರೆ. ಭ್ರಷ್ಟಾಚಾರ ನಡೆದಿದ್ರೆ ಜಿಎಸ್ಟಿ ಹೆಚ್ಚಳ ಆಗುತಿತ್ತಾ? ಬಜೆಟ್ ಮಂಡನೆ ಮೂಲಕ, ಡಿಕೆಶಿ ಅವರಿಗೆ ಪಾಠ ಕಲಿಸಿದ್ದಾರೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.