Saturday, May 18, 2024

ಯುವತಿ ಮಾತಿಗೆ ಮರುಳಾಗಿ ಈ ಸ್ವಾಮೀಜಿ ಕಳೆದುಕೊಂಡಿದ್ದು ಬರೋಬ್ಬರಿ 35 ಲಕ್ಷ!

ಬೆಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವತಿಯೊಬ್ಬಳು ತನ್ನ ಬಣ್ಣ ಬಣ್ಣದ ಮಾತಿನ ಮೂಲಕ ರಾಜ್ಯದ ಪ್ರಭಾವಿ ಮಠದ ಸ್ವಾಮೀಜಿಗೆ ವಂಚಿಸಿದ್ದು ಬರೋಬ್ಬರಿ 35 ಲಕ್ಷ!

ಹೌದು, ಇದು ರಾಜ್ಯದ ಪ್ರತಿಷ್ಠಿತ ಮಠಕ್ಕೆ ಸಂಬಂಧಿಸಿದ ಸ್ಫೋಟಕ ಸುದ್ದಿ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಂಬಾಳು ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯ ಶ್ರೀಗಳೇ ಯುವತಿಯ ಮಾತಿಗೆ ಮರುಳಾಗಿ 35 ಲಕ್ಷ ವಂಚನೆಗೊಳಗಾದ ಸ್ವಾಮೀಜಿ.

ಮೂರು ವರ್ಷಗಳ ಹಿಂದೆ ಎಲ್ಲವೂ ಸರಿ ಇತ್ತು. 2020ರಲ್ಲಿ ಯುವತಿಯೊಬ್ಬಳು ಫೇಸ್‌ಬುಕ್ ಮೂಲಕ ಶ್ರೀಗಳಿಗೆ ಪರಿಚಯವಾದಳು. ವರ್ಷ ಎಂಬ ಹೆಸರಿನಲ್ಲಿ ಸ್ವಾಮೀಜಿಗೆ ಪರಿಚಯವಾಗಿದ್ದ ಯುವತಿ, ಬಳಿಕ ತನ್ನ ಕಷ್ಟ ಹೇಳಿಕೊಂಡು ಶ್ರೀಗಳನ್ನು ತನ್ನ ಟ್ರ್ಯಾಕ್ ಗೆ ತಂದಿದ್ದಳು. ಯುವತಿಗೆ ಬಣ್ಣ ಬಣ್ಣದ ಮಾತಿಗೆ ಶ್ರೀಗಳು ಮರುಳಾಗಿದ್ದರು. ಕಷ್ಟ ಎಂದು 500 ರೂ. ಪಡೆದಿದ್ದ ಯುವತಿ ಬಳಿಕ ವಂಚಿಸಿದ್ದು ಬರೋಬ್ಬರಿ 35 ಲಕ್ಷ ರೂಪಾಯಿ.

500 ರೂ.ನಿಂದ ಶುರುವಾಗಿ 35 ಲಕ್ಷ ಮುಚ್ಚಿತ್ತು

ಕಂಬಾಳು ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಇದೀಗ ಯುವತಿ ಮೇಲೆ ಆರೋಪ ಮಾಡಿದ್ದಾರೆ. ವರ್ಷ ಎಂಬ ಹೆಸರಿನ ಯುವತಿ 2020ರಲ್ಲಿ ಫೇಸ್‌ಬುಕ್ ನಲ್ಲಿ ಪರಿಚಯವಾಗಿದ್ದಳು. ತನಗೆ ಕಷ್ಟ ಇರುವುದಾಗಿ ಹೇಳಿ ಪ್ರಾರಂಭದಲ್ಲಿ 500 ರೂ. ಪಡೆದಿದ್ದರು. ಯುವತಿ ಮಂಜುಳ ಎಂಬ ಮಹಿಳೆಯ ಖಾತೆಗೆ ಹಣ ಹಾಕಿಸಿಕೊಂಡಿದ್ದಳು ಎಂದು ಹೇಳಿದ್ದಾರೆ.

ಆರೋಗ್ಯದ ನೆಪ ಹೇಳಿ ವಂಚನೆ

ನನ್ನ ಬಳಿ 10 ಎಕರೆ ಜಮೀನು ಇದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನೆಲ್ಲಾ ಶ್ರೀಮಠಕ್ಕೆ ತಂದು ಕೊಡುತ್ತೇನೆ ಎಂದು ಯುವತಿ ಡ್ರಾಮಾ ಶುರು ಮಾಡಿದ್ದಾಳೆ. ನಂತರ, ನನ್ನ ಮೇಲೆ ಹಲ್ಲೆಯಾಗಿದೆ. ನಾನು ಅಸ್ವಸ್ಥಳಾಗಿ ಬೆಂಗಳೂರಿನ ಎಂ‌.ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದೇನೆ. ನನಗೆ ದುಡ್ಡಿನ ಅವಶ್ಯಕತೆಯಿದೆ ಅಂತಾ ಶ್ರೀಗಳ ಬಳಿ ತಿಳಿಸಿದ್ದಾಳೆ.

ವಂಚನೆ ಬೆಳಕಿಗೆ ಬಂದಿದ್ದು ಹೇಗೆ?

ಈ ವೇಳೆ ಶ್ರೀಗಳು, ಎಂ‌.ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ವಿಚಾರಿಸಿದ್ದಾರೆ. ವರ್ಷ ಎಂಬ ಹೆಸರಿನವರು ಯಾರೂ ನಮ್ಮ ಆಸ್ಪತ್ರೆಯಲ್ಲಿ ದಾಖಲಾಗಿಲ್ಲ ಅಂತಾ ಹೇಳಿದ್ದಾರೆ. ಆಗಲೇ ಯುವತಿಯ ರಂಗಿತರಂಗಿ ಆಟ ಬೆಳಕಿಗೆ ಬಂದಿದೆ. ಅಗಲೇ ಶ್ರೀಗಳಿಗೆ ಗೊತ್ತಾಗಿದ್ದು ನಾನು ವಂಚನೆಗೆ ಒಳಗಾಗಿದ್ದೇನೆ ಅಂತಾ. ಅಷ್ಟರಲ್ಲಾಗಲೇ ಯುವತಿ 35 ಲಕ್ಷ ಪೀಕಿದ್ದಳು.

ಎಫ್ಐಆರ್ ಆಗಿದ್ರೂ ರಹಸ್ಯವಾಗಿತ್ತು ಸ್ಟೋರಿ

ಈ ಸಂಬಂಧ ಶ್ರೀಗಳು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದರು. ಠಾಣೆ ಮೆಟ್ಟಿಲೇರಿದ್ರೂ ಸ್ವಾಮೀಜಿ ‌ಸ್ಟೋರಿ ರಹಸ್ಯವಾಗಿ ಉಳಿದಿತ್ತು. ಬೆಂಗಳೂರು ಗ್ರಾಮಾಂತರ ಪೊಲೀಸರು ಒಂದು ತಿಂಗಳಿಂದ ಕಾಪಾಡಿಕೊಂಡು ಬಂದಿದ್ದ ರಹಸ್ಯ ಇದೀಗ ಬಯಲಾಗಿದೆ. ಚನ್ನವೀರ ಶಿವಾಚಾರ್ಯ ಸ್ವಾಮೀಜಿ ದೂರಿನ ಮೇರೆಗೆ ಯುವತಿ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಖತರ್ನಾಕ್ ಲೇಡಿಗೆ ಬಲೆ ಬೀಸಿದ್ದಾರೆ.

RELATED ARTICLES

Related Articles

TRENDING ARTICLES