Monday, May 20, 2024

ರಾಜಕೀಯ ಅಂದ್ರೆ ‘ಹಣ, ಹೆಂಡ ಹಂಚೋದಲ್ಲ’ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು : ರಾಜಕೀಯ ಅಂದರೆ ವ್ಯಾಪಾರೀಕರಣದ ಕ್ಷೇತ್ರವಲ್ಲ. ಹಣ‌, ಹೆಂಡ ಹಂಚಿ ಜಾತಿ, ತೋಳ್ಬಲದ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದಲ್ಲ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಿರಸಿ-ಸಿದ್ದಾಪುರ ವಿಧಾನಸಭಾ‌ ಕ್ಷೇತ್ರದಲ್ಲಿ 100ಕ್ಕೆ 200ರಷ್ಟು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ. ನಾನು ಗೆದ್ದೇ ಗೆಲ್ತೀನಿ. ಯಾವುದೇ ಸಂಶಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

6ಕ್ಕೆ 6ರೂ ಕ್ಷೇತ್ರ ನಾವೇ ಗೆಲ್ತೀವಿ

ನಮ್ಮದು ಕಾರ್ಯಕರ್ತರ ದೊಡ್ಡ ಸೈನ್ಯವೇ ಇದೆ. ನಮ್ಮ‌ ತಂಡ ಭಾರತದ ಸೈನ್ಯದಷ್ಟೇ ಬಲಿಷ್ಠವಾಗಿದೆ. ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳ ಪೈಕಿ 6ರೂ ಕ್ಷೇತ್ರಗಳನ್ನು ನಾವೇ (ಬಿಜೆಪಿ) ಗೆಲ್ಲುತ್ತೇವೆ. ರಾಜ್ಯದಲ್ಲಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ ಎಂದು ಕಾಗೇರಿ ಹೇಳಿದ್ದಾರೆ.

ಇದನ್ನೂ ಓದಿ : ವರಿಷ್ಠರ ಧೂತನಾಗಿ ಕನಕಪುರಕ್ಕೆ ಕಾಲಿಡ್ತೀನಿ : ಆರ್. ಅಶೋಕ್

ರಾಜಕಾರಣ ಎಂದರೆ ನಿಸ್ವಾರ್ಥವಾದ ಜನ ಸೇವೆಯನ್ನು ಮಾಡುವ ಜವಾಬ್ದಾರಿಯ ಸ್ಥಾನವಿದು. ಈ ಕ್ಷೇತ್ರ ಎಂದಿಗೂ ವ್ಯಾಪಾರೀಕರಣ ಆಗಬಾರದು. ಮತದಾರರ ಓಲೈಕೆಗಾಗಿ ಆಮೀಷ ಹಾಗೂ ಜಾತಿ, ಧರ್ಮದ ವ್ಯವಸ್ಥೆ ಬಲಗೊಳಿಸುವುದೊಂದೇ ರಾಜಕಾರಣದ ಉದ್ದೇಶವಲ್ಲ. ಈ ಹಿನ್ನೆಲೆಯಲ್ಲಿ ಈ ಕ್ಷೇತ್ರದ ಜನ ನನ್ನನ್ನು ಗೆಲ್ಲಿಸುತ್ತಾರೆ ಎನ್ನುವ ನಂಬಿಕೆ‌ ಇದೆ ಎಂದು ತಿಳಿಸಿದ್ದಾರೆ.

ಇದೇ ಏಪ್ರಿಲ್ 18ರಂದು ನಾನು ನಾಮಪತ್ರ ಸಲ್ಲಿಸುತ್ತೇನೆ. ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಈ ವೇಳೆ ಭಾಗವಹಿಸಲಿದ್ದಾರೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES