Tuesday, May 21, 2024

ಕ್ರೆಡಿಟ್ ಪಾಲಿಟಿಕ್ಸ್: ನಾಳೆ ಸಿದ್ದರಾಮಯ್ಯರಿಂದ ಬೆಂಗಳೂರು-ಮೈಸೂರು ಹೆದ್ದಾರಿ ರಿವ್ಯೂ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಸಕ್ಕರೆ ನಾಡು ಮಂಡ್ಯ ಸಜ್ಜಾಗುತ್ತಿದೆ. ಹೀಗಾಗಿ, ಇಂದು ಎಸ್ ಪಿಜಿ ತಂಡ ಕೂಡ ಮಂಡ್ಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಮತ್ತೊಂದು ಕಡೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ಬೆಂಗಳೂರು-ಮೈಸೂರು ಹೆದ್ದಾರಿ ರಿವ್ಯೂ ಮಾಡಲು ಮುಂದಾಗಿದ್ದಾರೆ. ಇದು, ಮಂಡ್ಯ ಜನ್ರಲ್ಲಿ ಸಾಕಷ್ಟು ಕುತೂಹಲ ಮೂಡಿದೆ.

ಹೌದು, ಇದೇ ಮಾರ್ಚ್ 12 ರಂದು ಸಕ್ಕರೆ ನಾಡು ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಹೀಗಾಗಿ, ಮಂಡ್ಯದಲ್ಲಿ ಮೋದಿ ಆಗಮನಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಮಂಡ್ಯ ನಗರದ ಸುಮಾರು 12 ಕಿ.ಮೀ ದೂರವಿರುವ ಗೆಜ್ಜಲಗೆರೆ ಕಾಲೋನಿಯಲ್ಲಿ ಬೃಹತ್ ಸಮಾವೇಶ ಮಾಡಲಾಗುತ್ತಿದೆ.

16 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ

ಗೆಜ್ಜಲಗೆರೆ ಬಳಿ ಸುಮಾರು 16 ಎಕರೆ ಪ್ರದೇಶದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗ್ತಿದೆ. ಇನ್ನು ಭದ್ರತಾ ದೃಷ್ಟಿಯಿಂದ ಇಂದು ಎಸ್.ಪಿ.ಜಿ ತಂಡ ಸಮಾವೇಶದ ಸ್ಥಳಕ್ಕೆ ಖುದ್ದು ಆಗಮಿಸಿ ಪರಿಶೀಲನೆ ನಡೆಸಿದೆ. ಈ ವೇಳೆ ಮಂಡ್ಯ ಪೊಲೀಸ್ ಇಲಾಖೆ ಎಸ್.ಪಿ.ಜಿ ತಂಡಕ್ಕೆ ಮಾಹಿತಿ ನೀಡಿದೆ.

ಇದನ್ನೂ ಓದಿ : ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ನಿಂದ ಕ್ರೆಡಿಟ್ ಪಾಲಿಟಿಕ್ಸ್

ಒಂದೆಡೆ ರಾಜ್ಯ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಉದ್ಘಾಟಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಂದೆಡೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆದ್ದಾರಿ ಪರಿವೀಕ್ಷಣೆ (ರಿವ್ಯೂ) ಮಾಡಲು ಮುಂದಾಗಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ಮಂಡ್ಯದ ಗಡಿ ಭಾಗ ನಿಡಘಟ್ಟ ಬಳಿಯಿಂದ ಹೆದ್ದಾರಿ ವೀಕ್ಷಣೆ ಮಾಡಲಿದ್ದು, ಅಂತಿಮವಾಗಿ ಮೈಸೂರಿನ ಸಿದ್ದಲಿಂಗಪುರದ ಬಳಿ ಸುದ್ದಿಗೋಷ್ಠಿ ನಡೆಸಿ ಮಾತನಾಡಲಿದ್ದಾರೆ.

ಇದನ್ನೂ ಓದಿ : ಸರ್ಕಾರದ ಬೆಂಬಲದಿಂದಲೇ ಮಾಡಾಳ್ ಗೆ ಜಾಮೀನು : ರಾಮಲಿಂಗಾರೆಡ್ಡಿ ಆರೋಪ

ಕೇಸರಿ ಮಯವಾಗ್ತಿದೆ ಮಂಡ್ಯ

ಇನ್ನು ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆಯಲ್ಲಿ ಮಂಡ್ಯ ನಗರ ಕೇಸರಿಮಯವಾಗುತ್ತಿದೆ. ಭರದಿಂದ ಸಿದ್ದತೆ ಕಾರ್ಯ ನಡೆಯುತ್ತಿದೆ. ಈ ಮಧ್ಯಯೇ, ಸಿದ್ದರಾಮಯ್ಯ ಹೆದ್ದಾರಿ ಪರಿವೀಕ್ಷಣೆ ಮಾಡಲು ಮುಂದಾಗಿರುವುದು ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಒಟ್ನಲ್ಲಿ, ನಾಳಿನ ಸಿದ್ದರಾಮಯ್ಯ ಪ್ರವಾಸ ಕುತೂಹಲ ಮೂಡಿಸಿದ್ದು, ಹೆದ್ದಾರಿ ವೀಕ್ಷಣೆ ಬಳಿಕ ಎಷ್ಟು ಮಾರ್ಕ್ಸ್ ನೀಡಲಿದ್ದಾರೆ ಎಂದು ಕಾದು ನೋಡಬೇಕಿದೆ.

RELATED ARTICLES

Related Articles

TRENDING ARTICLES