Friday, September 20, 2024

ಅರಮನೆ ನಗರಿ ಮೈಸೂರಲ್ಲಿ ಅಪ್ಪು ಎಕ್ಸ್​ಪ್ರೆಸ್ ಶುಭಾರಂಭ

ಆ್ಯಂಬುಲೆನ್ಸ್ ಸಕಾಲಕ್ಕೆ ಸಿಕ್ಕಿದ್ರೆ ಅಪ್ಪು ಬದುಕ್ತಿದ್ರೋ ಏನೋ. ಅಂತಹ ಸ್ಥಿತಿ ಜನ ಸಾಮಾನ್ಯರಿಗೆ ಬರಬಾರದು ಅನ್ನೋ ಉದ್ದೇಶದಿಂದ ಪುನೀತ್ ರಾಜ್​ಕುಮಾರ್ ಹೆಸರಿನಲ್ಲಿ ಅಪ್ಪು ಎಕ್ಸ್​ಪ್ರೆಸ್ ಎಂಬ ಆ್ಯಂಬುಲೆನ್ಸ್ ಅನ್ನು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ನೀಡಲಾಗ್ತಿದೆ. ಇಂತಹ ಮಹತ್ವದ ಕಾರ್ಯಕ್ಕೆ ಕೈ ಹಾಕಿರೋದು ನಮ್ಮ ಕನ್ನಡದ ಸೂಪರ್ ಸ್ಟಾರ್ ಪ್ರಕಾಶ್ ರೈ. ಇದ್ರ ಅಸಲಿ ಕಹಾನಿ ಏನು ಅನ್ನೋದ್ರ ಡಿಟೈಲ್ಡ್ ಸ್ಟೋರಿ ನೀವೇ ಓದಿ.

  • 32 ಜಿಲ್ಲೆಗಳಿಗೆ ಅಪ್ಪು ಸ್ಮರಣಾರ್ಥ ಪ್ರಕಾಶ್ ರೈ ಆ್ಯಂಬುಲೆನ್ಸ್
  • ಸಕಾಲಕ್ಕೆ ಸಿಗದ ಆ್ಯಂಬುಲೆನ್ಸ್​ನಿಂದ ಅಪ್ಪು ಇನ್ನಿಲ್ಲವಾದ್ರಾ..?
  • ಪ್ರಕಾಶ್ ರೈ ಸಾಮಾಜಿಕ ಕಾರ್ಯಕ್ಕೆ ಯುವರತ್ನ ಸಾರಥಿ ಸಾಥ್

ಸದಾ ಕಷ್ಟದಲ್ಲಿದ್ದವ್ರಿಗೆ ನೆರವಿನ ಸಹಾಯ ಹಸ್ತ ಚಾಚುತ್ತಿದ್ದ ನಟ ಪುನೀತ್ ರಾಜ್​ಕುಮಾರ್ ನಮ್ಮ ನಡುವೆ ಇಲ್ಲದಿದ್ರೂ, ಅವ್ರ ಹೆಸರಲ್ಲಿ ಬಡವರ ಸೇವೆಗಾಗಿ ‘ಅಪ್ಪು ಎಕ್ಸ್‌ಪ್ರೆಸ್‌’ ಆ್ಯಂಬುಲೆನ್ಸ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಜ್ಜಾಗಿ ನಿಂತಿದೆ. ಬಹುಭಷಾ ನಟ ಪ್ರಕಾಶ್ ರೈ ತಮ್ಮ ಪ್ರಕಾಶ್ ರಾಜ್ ಫೌಂಡೇಷನ್​ನಿಂದ ಈ ಆ್ಯಂಬುಲೆನ್ಸ್ ಸೇವೆ ನೀಡಲು ಮುಂದಾಗಿರೋದು ವಿಶೇಷ.

ಯೂತ್ ಐಕಾನ್, ದೊಡ್ಮನೆ ಹುಡ್ಗ ಪುನೀತ್ ರಾಜ್​ಕುಮಾರ್ ಅವ್ರಿಗೆ ಒಂದು ಆ್ಯಂಬುಲೆನ್ಸ್ ಸಿಕ್ಕಿದ್ರೆ ಆ ಟೈಮಲ್ಲಿ ಅವ್ರ ಜೀವ ಉಳಿತಾ ಇತ್ತೊ ಏನೋ ಅನ್ನೋದು ಬಹುಭಾಷಾ ನಟ ಪ್ರಕಾಶ್ ರೈ ಅವ್ರ ಕನವರಿಕೆ. ಹೀಗಾಗಿಯೇ ನಟ ಪ್ರಕಾಶ್ ರೈ, ಅರಮನೆ ನಗರಿ ಮೈಸೂರಿನ ಮಿಷನ್‌ ಆಸ್ಪತ್ರೆಗೆ ಬಡ ರೋಗಿಗಳ ಸೇವೆಗೆಂದು ತಮ್ಮದೇ ಫೌಂಡೇಷನ್ ವತಿಯಿಂದ ಆ್ಯಂಬುಲೆನ್ಸ್ ಕೊಡುಗೆಯಾಗಿ ನೀಡಿದ್ದಾರೆ.

ಆಂಧ್ರದಲ್ಲಿ ಒಂದಷ್ಟು ಶಾಲೆಗಳನ್ನ ದತ್ತು ಪಡೆದಿರೋ ರೈ, ಶ್ರೀರಂಗಪಟ್ಟಣದಲ್ಲಿ ರೈತ ಕುಟುಂಬಕ್ಕೆ ಜೆಸಿಬಿ ಉಡುಗೊರೆ ನೀಡಿದ್ರು. ಇಂತಹ ನೂರಾರು ಸಾಮಾಜಿಕ ಕಾರ್ಯಗಳನ್ನ ಮಾಡಿರೋ ಪ್ರಕಾಶ್ ರೈ, ತಮ್ಮ ದುಡಿತದ ಒಂದು ಭಾಗವನ್ನು ಸತ್ಕಾರ್ಯಗಳಿಗೆ ಬಳಸುತ್ತಿದ್ದಾರೆ. ಇದೀಗ ಅಪ್ಪು ಸ್ಮರಣಾರ್ಥ ಅವ್ರ ಹೆಸ್ರಲ್ಲಿ ಌಂಬುಲೆನ್ಸ್ ಸೇವೆ ಒದಗಿಸಲು ಮುಂದಾಗಿರೋದು ನಿಜಕ್ಕೂ ಶ್ಲಾಘನೀಯ ಹಾಗೂ ಪ್ರಶಂಸನೀಯ ಬೆಳವಣಿಗೆ.

ತಮ್ಮದೇ ಫೌಂಡೇಷನ್ ವತಿಯಿಂದ ರಾಜ್ಯದಲ್ಲಿರೋ ಬಡ ರೋಗಿಗಳ ಸೇವೆಗೆಂದು ಪ್ರತಿಯೊಂದು ಜಿಲ್ಲೆಗೂ ಅಪ್ಪು ಎಕ್ಸ್​ಪ್ರೆಸ್‌ ಹೆಸ್ರಲ್ಲಿ ಆಸ್ಪತ್ರೆಗಳಿಗೆ ಆ್ಯಂಬುಲೆನ್ಸ್ ಕೊಡುಗೆ ನೀಡಲು ಮುಂದಾಗಿದ್ದಾರೆ. ಈ ಸೇವಾ ಕಾರ್ಯ ಮೈಸೂರಿನಿಂದ ಆರಂಭವಾಗಿದ್ದು, ಆ್ಯಂಬುಲೆನ್ಸ್ ಹಸ್ತಾಂತರ ಮಾಡಿದ್ದಾರೆ.  ಇದೇ ವೇಳೆ ಮಾತನಾಡಿರೋ ಪ್ರಕಾಶ್ ರೈ, ಆ್ಯಂಬುಲೆನ್ಸ್ ಇದ್ದಿದ್ರೆ ಅಪ್ಪು ಬದುಕುತ್ತಿದ್ದರು. ಆ ಆಲೋಚನೆಯಿಂದ್ಲೇ ನಾನು ಬಡವರಿಗೆ ತಕ್ಕ ಮಟ್ಟಿಗೆ ಅನುಕೂಲ ಆಗಲಿ ಅಂತ ಆ್ಯಂಬುಲೆನ್ಸ್ ನೀಡೋ ಯೋಚನೆ ಬಂತು. ಅಪ್ಪು ಅನುಪಸ್ಥಿತಿಯಲ್ಲಿ ಅವ್ರು ಮಾಡ್ತಿದ್ದ ಕೆಲಸಗಳನ್ನ ನಾವು ಮಾಡ್ಬೇಕಿದೆ ಎಂದ್ರು.

ಯುವರತ್ನ ಚಿತ್ರದ ನಿರ್ದೇಶಕ ಕಮ್ ಪುನೀತ್ ರಾಜ್​ಕುಮಾರ್​ರ ಆತ್ಮೀಯ ಆಗಿರೋ ಸಂತೋಷ್ ಆನಂದ್​ರಾಮ್ ಕೂಡ ಪ್ರಕಾಶ್ ರೈಗೆ ಸಾಥ್ ನೀಡಿದ್ರು. ಮೈಸೂರಿನ ಪಿಶ್​ಲ್ಯಾಂಡ್ ಹೋಟೆಲ್ ಸಿಬ್ಬಂದಿ ತಂದೆಗೆ ಹೃದಯ ಸಂಬಂಧಿ ಕಾಯಿಲೆಗೆ 50 ಸಾವಿರ ಹಣ ನೀಡಿದ್ದರಂತೆ ಅಪ್ಪು. ಅದೂ ಯಾರಿಗೂ ಹೆಳಬೇಡ ಅಂತಾ ಹೇಳಿದ್ರಂತೆ. ಆದ್ರೆ ಆ ಸಪ್ಲೈಯರ್ ನಮ್ಮ ಬಳಿ ಆ ಮಾತನ್ನ ಹೇಳಿ ಭಾವುಕರಾದ್ರು. ಪುನೀತ್ ರಾಜ್​ಕುಮಾರ್ ಅವ್ರ ವ್ಯಕ್ತಿತ್ವ ದೊಡ್ಡದು. ಪುನೀತ್ ಅವ್ರ ಹೆಸರನ್ನ ಶಾಶ್ವತವಾಗಿ ಉಳಿಸೋ ಆಸೆ, ಆಶಯ ನಮ್ಮದು. ನಾವೂ ಕೂಡ  ಪ್ರಕಾಶ್ ರೈ ಕಾರ್ಯಕ್ಕೆ ಕೈ ಜೋಡಿಸ್ತೀವಿ ಅಂತಾರೆ ಯುವರತ್ನ ಸಾರಥಿ.

ಕನ್ನಡ ಚಿತ್ರರಂಗಕ್ಕೆ ಸಾಲು ಸಾಲು ಪ್ರತಿಭೆಗಳನ್ನ ನೀಡಿದಂತಹ, ಕಲಾ ಪೋಷಣೆ ಮಾಡಿದಂತಹ ಕಸ್ತೂರಿ ನಿವಾಸ, ಅಣ್ಣಾವ್ರು ಹಾಗೂ ಅವ್ರ ರಾಜಕುಮಾರರ ಮೇಲೆ ರೈಗೆ ವಿಶೇಷವಾದ ಪ್ರೀತಿ, ಅಕ್ಕರೆ ಹಾಗೂ ಒಲವು. ಅದ್ರಲ್ಲೂ ಅಪ್ಪು ಅವ್ರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಒಡನಾಟ ಹೊಂದಿದ್ರು ರೈ. ಕೊನೆಯ ದಿನಗಳಲ್ಲಿ ಪುನೀತ್ ಅವ್ರು ಬಹಳ ಇಷ್ಟ ಪಟ್ಟು ಮಾಡಿದಂತಹ ಚಿತ್ರ ಯುವರತ್ನ. ಅದರಲ್ಲಿ ಯೂನಿವರ್ಸಿಟಿಯ ಪ್ರಿನ್ಸಿಪಲ್ ಆಗಿ ರೈ ಬಣ್ಣ ಹಚ್ಚಿದ್ರೆ, ಅವ್ರ ಕನಸನ್ನ ನನಸು ಮಾಡೋಕೆ ನಿಂತಿದ್ರು ಪುನೀತ್ ರಾಜ್​ಕುಮಾರ್. ಪಾಠಶಾಲಾ ಸಾಂಗ್ ಇಂದಿಗೂ ಕಣ್ಮುಂದೆ ಹರಿದಾಡುತ್ತಿದೆ.

ಸುರೇಶ್ ಬಿ, ಪವರ್ ಟಿವಿ, ಮೈಸೂರು.

RELATED ARTICLES

Related Articles

TRENDING ARTICLES