Saturday, September 28, 2024

ಲೇ ತಮ್ಮ ತಂಗಡಗಿ.. ನಿಮ್ಮ ನಾಯಕರೇ ನನ್ನನ್ನು ಏನು ಮಡೋಕೆ ಆಗಿಲ್ಲ, ನೀನು ಏನು ಮಾಡ್ತಿ : ಜನಾರ್ದನ ರೆಡ್ಡಿ

ಕೊಪ್ಪಳ : ನಾನು ಕಾರಟಗಿಯಲ್ಲಿದ್ದೇನೆ. ನಿನಗೆ ಧಮ್ ಇದ್ದರೆ ಬಂದು ನನ್ನ ಕಪಾಳಕ್ಕೆ ಹೊಡೆಯುತ್ತೀಯಾ? ಎಂದು ಸಚಿವ ಶಿವರಾಜ್ ತಂಗಡಗಿ ವಿರುದ್ದ ಏಕವಚನದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಜನಾರ್ದನ ರೆಡ್ಡಿ ವಾಗ್ದಾಳಿ ನಡೆಸಿದರು.

ಕೊಪ್ಪಳದ ಕಾರಟಗಿಯಲ್ಲಿ ನಡೆದ ರೋಡ್ ಶೋನಲ್ಲಿ ಮಾತನಾಡಿದ ಅವರು, ಇಡೀ ದೇಶ ಮೋದಿ.. ಮೋದಿ.. ಎಂದು ಕೂಗಿ ಕಿವಿ ಇಂಪಾಗಿ ಮಾಡಿಕೊಂಡಿದ್ದಾರೆ. ಆದ್ರೆ, ಈ ತಂಗಡಗಿಗೆ ಮೋದಿ.. ಮೋದಿ.. ಎಂದು ಕೂಗಿದರೆ ಕಿವಿಗೆ ಮುಳ್ಳು ಚುಚ್ಚಿದಂತಾಗಿದೆ ಎಂದು ಕಿಡಿಕಾರಿದರು.

ಲೇ ತಮ್ಮ ಎಂದು ಭಾಷಣ ಆರಂಭಿಸಿದ ಜನಾರ್ದನ ರೆಡ್ಡಿ, ನನ್ನೊಂದಿಗೆ ದುಡ್ಡು ತೆಗೆದುಕೊಂಡು ಎಂಎಲ್ಎ ಆಗಿ ಶಿವರಾಜ್ ತಂಗಡಗಿ ಆಯ್ಕೆಯಾಗಿದ್ದ. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಸಚಿವರನ್ನಾಗಿ ಮಾಡಿದ್ದು ತಪ್ಪು. ಲೇ ತಮ್ಮ ತಂಗಡಗಿ, ನಿಮ್ಮ ಕಾಂಗ್ರೆಸ್ ಮುಖಂಡರೇ ನನ್ನನ್ನು ಏನು ಮಾಡೋದಕ್ಕೆ ಆಗಿಲ್ಲ. ನೀನು ಏನು ಮಾಡ್ತಿ ಎಂದು ಹರಿಹಾಯ್ದರು.

ನಮ್ಮ ಪಕ್ಷದಲ್ಲಿ ಸಂಗಣ್ಣ ಕರಡಿ ರಾಜರಂತೆ ಇದ್ದರು. ಈಗ ಕಾಂಗ್ರೆಸ್ ಪಕ್ಷಕ್ಕೆ ಹೋಗಿದ್ದಾರೆ. ಅಲ್ಲಿ ಮಾತನಾಡಲು ಹೋದರೆ ದೂರ ತಳ್ಳುತ್ತಿದ್ದಾರೆ. ಬಸವರಾಜ ರಾಯರಡ್ಡಿ ಯಾವಾಗ ಶಿವರಾಜ್ ತಂಗಡಗಿಯನ್ನು ದೂರ ತಳ್ಳುತ್ತಾನೋ ಗೊತ್ತಿಲ್ಲ. ಬಿ.ವೈ. ವಿಜಯೇಂದ್ರ ಅವರನ್ನು ಕರ್ನಾಟಕದ ಬಾಹುಬಲಿಯಾಗಿ ಮಾಡಲು ರಾಜ್ಯದ 28 ಸ್ಥಾನ ಗೆಲ್ಲಬೇಕು ಎಂದು ಕರೆ ಕೊಟ್ಟರು.

ವಿಜಯೇಂದ್ರ ಭರ್ಜರಿ ಪ್ರಚಾರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕನಕಗಿರಿ ವಿಧಾನಸಭಾ ಕ್ಷೇತ್ರದ ಕಾರಟಗಿಯಲ್ಲಿ ಬೃಹತ್ ರೋಡ್ ಶೋ ಮೂಲಕ ಕೊಪ್ಪಳ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಬಸವರಾಜ್ ಕೆ ಶರಣಪ್ಪ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಮಾಜಿ ಶಾಸಕ ಬಸವರಾಜ ದಡೇಸಗೂರು, ರಾಜ್ಯ ಕಾರ್ಯದರ್ಶಿ ಶರಣು ತಳ್ಳೀಕೇರಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

RELATED ARTICLES

Related Articles

TRENDING ARTICLES