Monday, May 6, 2024

ಪ್ರಚಾರದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ನಿತಿನ್ ಗಡ್ಕರಿ : ಆರೋಗ್ಯವಾಗಿದ್ದೇನೆ ಎಂದು ಟ್ವೀಟ್

ಮಹಾರಾಷ್ಟ : ಮಹಾರಾಷ್ಟದ ಯಾವತ್ಮಲ್ ನಗರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರಜ್ಞಾಹೀನರಾಗಿ ಕುಸಿದು ಬಿದ್ದ ಘಟನೆ ನಡೆದಿದೆ.

ಎನ್ ಡಿಎ ಅಭ್ಯರ್ಥಿ ರಾಜಶ್ರೀ ಪಾಟೀಲ್ ಅವರ ಪ್ರಚಾರಕ್ಕೆಂದು ನಿತಿನ್ ಗಡ್ಕರಿ ಆಗಮಿಸಿದ್ದರು. ಪ್ರಚಾರ ಭಾಷಣ ಮಾಡುತ್ತಿದ್ದ ಸಂದರ್ಭದಲ್ಲೇ ನಿತಿನ್ ಗಡ್ಡರಿ ಮೂರ್ಚೆ ತಪ್ಪಿ ಕುಸಿದು ಬಿದ್ದಿದ್ದಾರೆ.

ಮಹಾರಾಷ್ಟ್ರದ್ಯಂತ ತಾಪಮಾನ ಏರಿಕೆಯಾಗಿದ್ದು ಹಲವು ಭಾಗಗಳಲ್ಲಿ ಬಿಸಿಗಾಳಿ ಬೀಸುತ್ತಿದೆ. ಇದರಿಂದಾಗಿ ನಿತಿನ್ ಗಡ್ಕರಿಯವರು ಪ್ರಜ್ಞೆ ತಪ್ಪಿರಬಹುದು ಎನ್ನಲಾಗಿದೆ. ಕುಸಿದು ಬಿದ್ದ ಗಡ್ಕರಿಯವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ನೀಡಲಾಗಿದೆ. ಪ್ರಸಕ್ತ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

2018ರಲ್ಲೂ ಇದೇ ರೀತಿ ಕುಸಿದುಬಿದ್ದಿದ್ದರು

2018ರಲ್ಲೂ ಅಹಮದ್ ನಗರದಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವೇಳೆ, ರಾಷ್ಟ್ರಗೀತೆ ಹಾಡುವಾಗಲೇ ನಿತಿನ್ ಗಡ್ಕರಿ ಪ್ರಜ್ಞೆತಪ್ಪಿ ಕುಸಿದು ಬಿದ್ದಿದ್ದರು. ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾದ ಸಂದರ್ಭದಲ್ಲಿ ಈ ರೀತಿ ಪ್ರಜ್ಞೆ ಹೋಗುತ್ತದೆ. ಜತೆಗೆ ನಿತಿನ್ ಗಡ್ಕರಿ ಅವರು ಕೊಬ್ಬು ಕರಗಿಸಿ ದೇಹದ ತೂಕ ಇಳಿಸಿಕೊಳ್ಳುವ ಸಲುವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು. ಅಂದಿನಿಂದಲೂ ಅವರಿಗೆ ನಿಶಕ್ತಿ ಕಾಡಲಾರಂಭಿಸಿದೆ.

ಆರೋಗ್ಯವಾಗಿದ್ದೇನೆ ಎಂದ ಗಡ್ಕರಿ

ಇನ್ನೂ, ನಿತಿನ್ ಗಡ್ಕರಿ ಅವರು ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬಿಸಿಲಿನ ತಾಪದಿಂದ ಅನಾನುಕೂಲ ಸಂಭವಿಸಿದೆ. ಆದರೆ, ಈಗ ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ನಿಮ್ಮ ಪ್ರೀತಿ ಮತ್ತು ಹಾರೈಕೆಗಳಿಗೆ ಧನ್ಯವಾದಗಳು. ಮುಂದಿನ ಸಭೆಗೆ ಹಾಜರಾಗಲು ವರುದ್​ಗೆ ಹೊರಡುತ್ತಿದ್ದೇನೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES